ರಾಯಚೂರು: ಜಲ ಜೀವನ್ ಮೀಷನ್ (ಜೆಎಂಎಂ) ಕಾಮಗಾರಿಗಾಗಿ ತಂದು ಹಾಕಿದ್ದ ಪೈಪ್ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ರಾಯಚೂರಿನ ದೇವಸೂಗೂರು ಗ್ರಾಮದಲ್ಲಿ ಬುಧವಾರ ಜರುಗಿದೆ. ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಜಿಲ್ಲೆಯ ಮನೆ ಮನೆಗೆ ನೀರು ಪೂರೈಕೆ ಮಾಡಲು ಜೆಎಂಎಂ ಕಾಮಗಾರಿ ನಡೆಯುತ್ತಿದೆ. ದೇವಸೂಗೂರು ಗ್ರಾಮ ಪಂಚಾಯತಿ ಕಚೇರಿಯ ಹತ್ತಿರದ ಹಿಂಬದಿಯ ಖಾಲಿ ಜಾಗದಲ್ಲಿ ಪೈಪ್ಗಳನ್ನು ಗುತ್ತಿಗೆದಾರರು ತಂದು ಹಾಕಿದ್ದರು. ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡು ಭಾರಿ ಪ್ರಮಾಣದಲ್ಲಿ ಪೈಪ್ ನಾಶವಾಗಿದೆ ಎಂದು ದೇವಸೂಗೂರು ಗ್ರಾ.ಪಂ.ಪಿಡಿಒ ದೂರವಾಣಿ ಮೂಲಕ ತಿಳಿಸಿದರು.
ಒಟ್ಟು 3 ಕಿ.ಮೀಗೆ ಆಗುವಷ್ಟು ಸುಮಾರು 12 ಪೈಪ್ ಬಂಡಲ್ಗಳು ಆಹುತಿಯಾಗಿವೆ. ಅಂದಾಜು 10 ಲಕ್ಷ ರೂ. ಗಳಿಗೂ ಹೆಚ್ಚು ನಷ್ಟವಾಗಿದೆ. ಪೈಪ್ಗಳನ್ನು ಹಾಕಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಒಣ ಹುಲ್ಲು ಬೆಳೆದಿದ್ದು, ಅದಕ್ಕೆ ಕಿಡಿ ತಾಗಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶಕ್ತಿನಗರ ಪೊಲೀಸ್ ಠಾಣೆ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.