ಹುಬ್ಬಳ್ಳಿ: ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇಂದಿನಿಂದಲೇ ಆರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗೆ ಈವರೆಗೆ 2 ಲಕ್ಷ 90 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಅರ್ಜಿ ಪರಿಷ್ಕರಣೆ ಮಾಡಿ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಈಗಾಗಲೇ ಅರ್ಜಿ ಹಾಕಿಕೊಂಡು ಕಾಯುತ್ತಿರುವ ಜನರಿಗೆ ಆದಷ್ಟು ಬೇಗ ಕಾರ್ಡ್ ವಿತರಣೆ ಮಾಡುವುದು ನಮ್ಮ ಆದ್ಯತೆ ಎಂದು ಹೇಳಿದರು.
ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವವರ ಕಾರ್ಡ್ ರದ್ದತಿ ಪ್ರಕ್ರಿಯೆ ನಡೆಯುತ್ತಿದೆ. ಅದೇ ರೀತಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಜಾಲಕ್ಕೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ಕ್ರಮ ಜರುಗಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದರು.
ಅಕ್ಕಿ ತರುವ ಪ್ರಯತ್ನ: ನಾನು ಸಚಿವನಾದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ನುಡಿದಂತೆ ನಡೆದಿದ್ದೇವೆ. ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ಮಾಡಿದರು. ಚುನಾವಣೆಗೆ ಮುನ್ನ ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೆವು, ಆದರೆ ಕೇಂದ್ರ ಸರ್ಕಾರ ಅಕ್ಕಿ ಇದ್ದರೂ, ಕೊಡಲು ನಿರಾಕರಣೆ ಮಾಡಿದರು. ಇದರಲ್ಲಿ ರಾಜಕೀಯ ಬೆರೆಸಬಾರದಿತ್ತು. ಆದರೆ ಕೇಂದ್ರ ಸರ್ಕಾರ ಇಲ್ಲಿ ರಾಜಕಾರಣ ಮಾಡಿತು. ನಾವು ಅದಕ್ಕೆ ಸರಿಸಮಾನವಾಗಿ ಜುಲೈನಿಂದ ಹಣ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ನಾವು ಅಕ್ಕಿ ತರುವ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಿ ಬೆಳೆಯುವ ಪ್ರದೇಶದಿಂದ ಅಕ್ಕಿ ತರುವ ಪ್ರಯತ್ನ ಮಾಡುತ್ತಿದ್ದೇವೆ. ಶೀಘ್ರದಲ್ಲಿ ನಾವು ರಾಜ್ಯದ ಜನರಿಗೆ ಅಕ್ಕಿ ಕೊಡುತ್ತೇವೆ. ಸ್ವತಂತ್ರ ಭಾರತದಲ್ಲಿ ಸಾಮಾನ್ಯ ಜನರಿಗೆ ಬೇಕಾಗಿರುವ ಅನುಕೂಲ ಮಾಡುತ್ತಿದ್ದೇವೆ. ಅಕ್ಕಿ ದುರಪಯೋಗ ಆಗುತ್ತಿದೆ ಎನ್ನುವ ಮಾತಿದೆ. ಅಕ್ಟೋಬರ್ವರೆಗೂ ನಾವು ಕೊಡುತ್ತಿರುವ ಹಣ ಸಂದಾಯ ಆಗಿದೆ ಎಂದು ಹೇಳಿದರು.
ಪಡಿತರ ಸಂಘದ ಅಧ್ಯಕ್ಷರನ್ನು ಭೇಟಿಯಾಗಿದ್ದು, ಅವರು ಅಕ್ಕಿ ಬೇಕು ಎನ್ನುತ್ತಿದ್ದಾರೆ. ಅಕ್ಕಿ ಮಾರಾಟ ಮಾಡಿರುವ ಸಂಶಯ ಇದೆ. ಅಕ್ಕಿ ಜೊತೆಗೆ ಬೇಳೆ ಕೊಡುವ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಹಣ ಕೊಡುವುದರಿಂದ ಪಡಿತರ ಸಂಘಕ್ಕೆ ಕಮಿಷನ್ ಸಿಗುತ್ತಿಲ್ಲ. ನಿಮ್ಮ ಕಮಿಷನ್ ಬಂದೇ ಬರುತ್ತದೆ. ಅಕ್ಕಿ ಬದಲಿಗೆ ಸದ್ಯ ನಾವು ಹಣ ಕೊಡುತ್ತಿದ್ದೇವೆ. ಮುಂದೆ ಅಕ್ಕಿ ಕೊಡುವ ವ್ಯವಸ್ಥೆ ಆಗುತ್ತಿದೆ ಎಂದರು.