ಬೆಳಗಾವಿ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರ(ಸೆ.22)ದಿಂದ ಹದಿನೈದು ದಿನಗಳ ಕಾಲ ಕುಡಿಯುವ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಸೆ.20) ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರಾವರಿ ಹಿತಾಸಕ್ತಿ ಹಾಗೂ ಕುಡಿಯುವ ನೀರು ಒದಗಿಸುವುದು ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಲಹಾ ಸಮಿತಿಯ ನಿರ್ಧಾರ ಆಧರಿಸಿ ಅಧಿಕಾರಿಗಳು ಆದೇಶ ಮಾಡಲಿದ್ದಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರದಿಂದ ಹದಿನೈದು ದಿನಗಳವರೆಗೆ ನೀರು ಹರಿಸಲಾಗುವುದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಂದು ತಿಳಿಸಿದರು.
ಶಾಸಕ ಎನ್.ಎಚ್.ಕೋನರೆಡ್ಡಿ, ಮಳೆ ಕೊರತೆಯಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದೆ. ಆದ್ದರಿಂದ ಜನರಿಗೆ ತೊಂದರೆಯಾಗದಂತೆ ನೀರು ಬಿಡಬೇಕಿದೆ. ನೀರಾವರಿಗೆ ಅಗತ್ಯವಿರುವ ನೀರು ಮೀಸಲಿಟ್ಟುಕೊಂಡು ಅಗತ್ಯತೆ ಆಧರಿಸಿ ಕುಡಿಯುವ ನೀರು ಬಿಡುಗಡೆಗೊಳಿಸಬೇಕು” ಎಂದು ಸಲಹೆ ನೀಡಿದರು.
ಬರಗಾಲ ಎಂದು ಘೋಷಿಸಿರುವುದರಿಂದ ಪರಿಸ್ಥಿತಿ ಆಧರಿಸಿ ಕುಡಿಯುವ ಉದ್ಧೇಶಕ್ಕಾಗಿಯೇ ಹಂತ ಹಂತವಾಗಿ ಬಿಡುಗಡೆಗೊಳಿಸಬಹುದು ಎಂದು ಶಾಸಕ ಕೋನರೆಡ್ಡಿ ಅಭಿಪ್ರಾಯಪಟ್ಟರು.
ಸವದತ್ತಿ ಶಾಸಕರಾದ ವಿಶ್ವಾಸ್ ವೈದ್ಯ, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.