ದಾವಣಗೆರೆ : ಬಸನಗೌಡ ಕುಸುಗೂರು ಮತ್ತು ವಿಜಯಲಕ್ಷ್ಮಿ ಬಿ.ಕುಸುಗೂರು ವೃತ್ತಿಯಲ್ಲಿ ವೈದ್ಯ ದಂಪತಿ.
ವೃತ್ತಿ ಜೀವನದಲ್ಲಿ ಬಿಡುವು ಮಾಡಿಕೊಂಡು ತಮ್ಮ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಬಿಡಾಡಿ ದನಗಳನ್ನು ತಂದು ಪೋಷಣೆ ಮಾಡುತ್ತಿದ್ದಾರೆ. ಹೀಗೆ ಪೋಷಿಸಿದ ಜಾನುವಾರುಗಳನ್ನು ಬಡ ರೈತರಿಗೆ ಉಚಿತವಾಗಿ ಉಳುಮೆಗೆ ಕೊಡುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ಬಸವಪಟ್ಟಣ ಎಂಬ ಪುಟ್ಟ ಗ್ರಾಮದಲ್ಲಿ ಇವರು ಕುಸುಗೂರು ಡಾಕ್ಟರ್ ಎಂದೇ ಪರಿಚಿತರು. ದಶಕಗಳಿಂದ ವೈದ್ಯ ವೃತ್ತಿ ಮಾಡುತ್ತಾ ಅದರೊಂದಿಗೆ ಜಾನುವಾರುಗಳ ಪೋಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಬಿಡಾಡಿ ದನಗಳು, ಸಾಕಲಾಗದೆ ಬಿಟ್ಟು ಬಿಡುವ ದನಗಳು, ಕಸಾಯಿ ಖಾನೆಗೆ ಸಾಗಿಸುವ ದನಗಳನ್ನು ಡಾ. ಬಸನಗೌಡ ಕುಸುಗೂರು ತಂದು ತಮ್ಮ ಪುಟ್ಟ ಗೋಶಾಲೆಯಲ್ಲಿರಿಸಿ ಸಾಕುತ್ತಿದ್ದಾರೆ.
ಸತತ 40 ವರ್ಷಗಳಿಂದ ಈ ಕಾಯಕ ಮಾಡುತ್ತಿರುವ ಬಸನಗೌಡ ಕುಸುಗೂರು ಸಾಕಷ್ಟು ಜಾನುವಾರುಗಳನ್ನು ಪೋಷಿಸುತ್ತಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಆಕಳು, ಗಂಡು ಹೋರಿ, ಎಮ್ಮೆಗಳಿಗೆ ಮರುಜನ್ಮ ನೀಡಿದ್ದಾರೆ. ಹೀಗೆ ಪೋಷಣೆ ಮಾಡಿದ ಜಾನುವಾರುಗಳನ್ನು ಬೇಸಾಯಕ್ಕೆ ಬೇಕೆಂದು ಕೇಳಿ ಬರುವ ಬಡ ರೈತರಿಗೆ ಉಚಿತವಾಗಿ ಗಂಡು ಹೋರಿಗಳನ್ನು ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಇಲ್ಲಿಯತನಕ ಸರಿಸುಮಾರು 35ಕ್ಕೂ ಹೆಚ್ಚು ಗಂಡು ಹೋರಿಗಳನ್ನು ರೈತರಿಗೆ ಬೇಸಾಯ ಮಾಡಲು ಉಚಿತವಾಗಿ ಕೊಟ್ಟಿರುವ ಉದಾಹರಣೆಗಳಿವೆ. ಪ್ರಸ್ತುತ, ಇವರ ಗೋಶಾಲೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ನಾಲ್ಕೈದು ಕೆಲಸಗಾರರನ್ನು ನೇಮಿಸಿದ್ದಾರೆ.
ಇವರ ಪುತ್ರ ವರುಣ್ ಕುಸುಗೂರು ಅವರ ಪತ್ನಿ ವಿಜಯಲಕ್ಷ್ಮಿ ಬಿ.ಕುಸುಗೂರು ಅವರು ಮಕ್ಕಳ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೂ ಕೂಡಾ ಗೋಶಾಲೆಯ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ.
ವಿಜಯಲಕ್ಷ್ಮಿ ಬಿ.ಕುಸುಗೂರು ಪ್ರತಿಕ್ರಿಯಿಸಿ, “ಅವರು ಕ್ಲಿನಿಕ್ನಲ್ಲಿ ರೋಗಿಗಳಿಲ್ಲದಿದ್ದರೆ ಗೋಶಾಲೆಗೆ ತೆರಳಿ ಪೋಷಣೆ ಮಾಡುತ್ತಾರೆ. ನಾನೂ ಕೂಡ ಕೆಲಕಾಲ ಬಂದು ಗೋವುಗಳನ್ನು ನೋಡಿಕೊಳ್ಳುತ್ತೇನೆ. ಅವರಿಗಿದು ಒಂದು ಹವ್ಯಾಸ. ಚಿಕ್ಕವನಿಂದಲೇ ದನ ಮೇಯಿಸಿಕೊಂಡು ಬೆಳೆದಿದ್ದಾರೆ. ಆದ್ದರಿಂದ ಈ ಕೆಲಸ ಮಾಡುತ್ತಿದ್ದಾರೆ. ಜಾನುವಾರುಗಳಿಗೆ ತೊಂದರೆಯಾದರೆ ಅವರು ಸಹಿಸಿಕೊಳ್ಳುವುದಿಲ್ಲ. ನಮ್ಮ ಬಳಿ ಯಾವ ಜಾನುವಾರುಗಳು ಬಂದ್ರೂ ನಾವು ಅವುಗಳನ್ನು ಪೋಷಣೆ ಮಾಡ್ತೇವೆ” ಎಂದರು.