ಸವದತ್ತಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಮಾತ್ರ ನನಗೆ ಹೆಚ್ಚಿನ ನೆಮ್ಮದಿಯೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಯಲ್ಲಮ್ಮ ಪುರಸಭೆ ಸಭಾಂಗಣದಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ನಗರದಲ್ಲಿ ಮನೆಗಳಿಗೆ ಪ್ರತಿದಿನ ನೀರು ಪೂರೈಕೆಯಾಗಬೇಕಿದೆ.
ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಹಕರಿಸಿರಿ. ಜನರ ಮೂಲ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಬೇಕಿರುವುದು ಆಧ್ಯ ಕರ್ತವ್ಯವಾಗಿದೆ.
18 ಸಾವಿರ ಜನತೆಗಾಗಿ 1997ರಲ್ಲಿ ಜಾಕ್ವೆಲ್ ಸ್ಥಾಪನೆಯಾಗಿತ್ತು. ಸಧ್ಯ ನಗರದಲ್ಲಿ 50 ಸಾವಿರಕ್ಕೂ ಅಧಿಕ ಜನರು ವಾಸವಿದೆ. ವಿದ್ಯುತ್ ಪೂರೈಕೆಯೂ ಸಮರ್ಪಕವಾಗಿಲ್ಲ. ಕಾರಣ ನೀರಿನ ಸಮಸ್ಯೆ ಉಲ್ಭಣಿಸಿದೆ. ಸಧ್ಯ ಪ್ರಗತಿಯಲ್ಲಿರುವ 24*7 ಕುಡಿಯುವ ನೀರಿನ ಯೋಜನೆಗೆ ಪೂರ್ಣವಾಗಲು ಕನಿಷ್ಟ 2 ವರ್ಷ ಬೇಕಿದೆ. ಕನಿಷ್ಟ 4 ದಿನಗಳಿಗೊಮ್ಮೆ ನೀರು ಪೂರೈಸಲು ಕ್ರಮವಿರಿಸಲಾಗುವದು. ಜನತೆ ಸಹಕರಿಸಬೇಕೆಂದು ವಿನಂತಿಸಿದರು.
ಪುರಸಭೆಯಲ್ಲಿನ ಪತ್ರ ವ್ಯವಹಾರ ಸರಿಯಿಲ್ಲ. ಆನರೊಂದಿಗೆ ಸಿಬ್ಬಂದಿಗಳು ಸಮಯೋಚಿತವಾಗಿ ವರ್ತಿಸಿ ಜನರ ಸಮಸ್ಯೆಗೆ ಸ್ಪಂಧಿಸುವದಕ್ಕಾಗಿಯೇ ನಿಮ್ಮನ್ನು ನಿಯೋಜಿಸಲಾಗಿದೆ. ಅಸಡ್ಡೆ ತೋರಿದಲ್ಲಿ ಸೂಕ್ರ ಕ್ರಮದ ಎಚ್ಚರಿಕೆ ನೀಡಿದರು. ಸಿಬ್ಬಂದಿಗಳ ಕೊರತೆಯಾದಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಿರಿ. ಸರಕಾರದಿಂದ ಮಹತ್ತರ ಯೋಜನೆಗಳನ್ನು ಹೊರಡಿಸಲಾಗಿದೆ. ಎಲ್ಲರು ಸಹಕರಸಿದರೆ ಜನತೆಗೆ ಉತ್ತಮ ಆಡಳಿತ ನೀಡೋಣ ಎಂದರು.
ಈ ವೇಳೆ ಮುಖ್ಯಧಿಕಾರಿ ಪ್ರಕಾಶ ಚನ್ನಪ್ಪನವರ, ಶಿವಾನಂದ ಹೂಗಾರ, ಮಲ್ಲಿಕಾರ್ಜುನ ಪುರದುಗುಡಿ, ಬಾಪು ಚೂರಿಖಾನ, ಯಲ್ಲಪ್ಪ ರುದ್ರಾಕ್ಷಿ, ಮೌಲಾಸಾಬ್ ತಬ್ಬಲಜಿ ಹಾಗೂ ಪ್ರಮುಖರು ಇದ್ದರು.