ಬೆಂಗಳೂರು: ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಅಕ್ಷರಸಹ ನಲುಗಿ ಹೋಗಿವೆ, ಒಂದೆಡೆ ಮಳೆ, ಮತ್ತೊಂದೆಡೆ ಭೀಮಾ, ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಜನ ಕಂಗಾಲಾಗಿದ್ದಾರೆ. ಮನೆ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವಂತಾಗಿದೆ. ಇದೀಗ ಸ್ವಲ್ಪ ಮಟ್ಟಿಗೆ ಮಳೆ ಹಾಗೂ ಪ್ರವಾಹ ತಗ್ಗಿದರೂ ಜನರಲ್ಲಿರುವ ಭೀತಿ ಮಾತ್ರ ಕಡಿಮೆಯಾಗಿಲ್ಲ.
ವಿಜಯಪುರ ಹಾಗೂ ಕಲಬುರಗಿಯ ಭೀಮಾ ನದಿ ತೀರಗಳಲ್ಲಿ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನ ಅನ್ನ, ಆಶ್ರಯ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೀಗಾಗಿ ಇದೀಗೆ ನೆರೆ ತಗ್ಗಿದರೂ ಸಂತ್ರಸ್ತರ ಭೀತಿ ಮಾತ್ರ ಕಡಿಮೆಯಾಗಿಲ್ಲ. ಭೀಮಾ ನದಿ ಪ್ರವಾಹದಿಂದಾಗಿ ಕಲಬುರಗಿಯ ಹೊನ್ನಕಿರಣಗಿ ಗ್ರಾಮದ ರಸ್ತೆ ಸಂಪರ್ಕ ಕಡಿತ ಸಂಪೂರ್ಣ ಕಡಿತವಾಗಿದೆ. ಗರ್ಭಿಣಿಯರು, ವೃದ್ದರು ಹಾಗೂ ಮಕ್ಕಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಗ್ರಾಮಕ್ಕೆ ಸೇತುವೆ ನಿರ್ಮಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಇದೀಗ ರಸ್ತೆ ಸಂಪರ್ಕ ಕಡಿತದಿಂದ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಜನ ಕಂಗಾಲಾಗಿದ್ದಾರೆ.
ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಕೇವಲ ಮತಕ್ಕಾಗಿ ಬರುತ್ತಾರೆ. ಯಾವ ಜನಪ್ರತಿನಿಧಿಯೂ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ಇಂತಹವರನ್ನು ಆಯ್ಕೆ ಮಾಡಿರುವುದು ನಮ್ಮ ದುರಂತ ಎಂದು ಉಕ್ಕಿ ಹರಿಯುವ ನದಿಯಲ್ಲಿ ನಿಂತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.