ರೋಣ (ಗದಗ ಜಿಲ್ಲೆ): ‘ಮರಳಿ ನಮಿಸುವ ಸಂಸ್ಕೃತಿ ಗೊತ್ತಿಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಶಾಸಕ ಎಚ್.ಕೆ.ಪಾಟೀಲ ತಿರುಗೇಟು ನೀಡಿದರು.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರಿಗೆ ಸ್ವಪಕ್ಷದಲ್ಲೇ ಗೌರವ ಸಿಗುತ್ತಿಲ್ಲ ಎಂದು ಹೇಳಿರುವ ಪ್ರಧಾನಿ ಮೋದಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾನಿ ಅವರು ಕೈ ಜೋಡಿಸಿ ನಿಂತಾಗ ಮೋದಿ ಅವರು ಮರಳಿ ನಮಸ್ಕಾರ ಮಾಡಲಿಲ್ಲ.
ಈಗ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ರಿ ಹಿಡಿದಿಲ್ಲ ಅಂತ ಮಾತನಾಡುತ್ತಾರೆ. ಮೋದಿ ಅವರೇ ಎಲ್ಲಿದ್ರಿ ನೀವು?’ ಎಂದು ಪಟ್ಟಣದಲ್ಲಿ ಮಂಗಳವಾರ ನಡೆದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಟಾಂಗ್ ನೀಡಿದರು.
‘ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋನಿಯಾ ಗಾಂಧಿ ಯಾವ ರೀತಿಯಲ್ಲಿ ಗೌರವ ಕೊಡುತ್ತಾರೆ ಎಂಬುದು ನಮಗೆ ಗೊತ್ತು. ಖರ್ಗೆ ಬರುತ್ತಾರೆ ಅಂದರೆ, ಸೋನಿಯಾ ಗಾಂಧಿ ಐದು ನಿಮಿಷ ಮುಂಚಿತವಾಗಿಯೇ ಬರುತ್ತಾರೆ. ಖರ್ಗೆ ಅವರಿಗೆ ಸಿಗುವ ಗೌರವಕ್ಕೆ ಎಐಸಿಸಿ ಸದಸ್ಯರೇ ಸಾಕ್ಷಿ’ ಎಂದರು.