ಬೆಂಗಳೂರು: ಕಾಂಗ್ರೆಸ್ ಕಚೇರಿ ಎದುರು ತಮ್ಮ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿ ನಾಯಕರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಹೈಗ್ರೌಂಡ್ಸ್ ಠಾಣೆಯಿಂದ ಪಾದಯಾತ್ರೆ ಮಾಡಿಕೊಂಡು ಕಮೀಷನರ್ ಕಚೇರಿಗೆ ಆಗಮಿಸಿದ ಬಿಜೆಪಿ ನಾಯಕರು ದೂರು ನೀಡಿದ್ದಾರೆ. ಕಾಂಗ್ರೆಸ್ನವರು ಗೂಂಡಾಗಿರಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಎದುರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಕೈಬರಹದಲ್ಲಿಯೇ ದೂರು ನೀಡಿದ್ದಾರೆ. ಈ ವೇಳೆ ಆಯುಕ್ತರ ಕಚೇರಿ ಎದುರು ಧಿಕ್ಕಾರ ಘೋಷಣೆ ಕೂಗಿದ್ದಾರೆ.
ಅಶ್ವಥ್ ನಾರಾಯಣ, ಬಿಪಿ ಹರೀಶ್, ಸಿಕೆ ರಾಮಮೂರ್ತಿ, ಎಸ್ ಹರೀಶ್ ಮೇಲೆ ಮೊಟ್ಟೆ, ದೊಣ್ಣೆ, ರಾಡ್ಗಳಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ಹರಿಹರ ಶಾಸಕ ಬಿ.ಪಿ. ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆಯಿಂದ ಹಲ್ಲೆ ಮಾಡಿದ್ದಾರೆ. ಅನೇಕ ಮೊಟ್ಟೆಗಳಿಂದ ಹರೀಶ್ ತಲೆಗೆ ಹೊಡೆದು ಅವರನ್ನು ಎತ್ತಿಕೊಂಡು ಹೋಗುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅಲ್ಲದೇ ನಮ್ಮನ್ನು ಬಂಧಿಸಿ ಕರೆತರುತ್ತಿದ್ದ ಬಸ್ಸಿಗೆ ದೊಣ್ಣೆ, ರಾಡ್ನಿಂದ ಹೊಡೆದಿದ್ದಾರೆ. ಬಸ್ಸಿನಲ್ಲಿ ಒಟ್ಟಿಗೆ ಸೇರಿ ಧಿಕ್ಕಾರ ಹಾಕಿದರೂ ಕೂಡ ನಮ್ಮ ಕಾರ್ಯಕರ್ತ ಪ್ರಶಾಂತ್ಗೆ ರಾಡ್ನಿಂದ ಹೊಡೆದಿದ್ದಾರೆ.
ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಅವರಿಗೆ ಮೊಟ್ಟೆಯಿಂದ, ಶಾಸಕ ಸಿಕೆ ರಾಮಮೂರ್ತಿ ಅವರಿಗೆ ರಾಡ್ನಿಂದ ಹೊಡೆದಿದ್ದಾರೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್ ಅವರಿಗೆ ದೊಣ್ಣೆ ಮತ್ತು ಪೈಪ್ಗಳಿಂದ ಹೊಡೆದಿದ್ದಾರೆ. ಕಾರ್ಯಕರ್ತ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ. ಮೆರವಣಿಗೆ ಹೋಗುತ್ತಿದ್ದಾಗ ಕೆಲವರ ಮೇಲೆ ಹಲ್ಲೆಯಾಗಿದೆ. ಹೀಗಾಗಿ ತಕ್ಷಣ ಕಾನೂನು ಕ್ರಮ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Laxmi News 24×7