ಬೆಂಗಳೂರು: ನೆರೆ ರಾಜ್ಯಗಳೊಂದಿಗೆ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದರು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರಿಗೆ ತುರ್ತು ದೂರವಾಣಿ ಕರೆ ಮಾಡಿ , ಚರ್ಚಿಸಿದ್ದಾರೆ. ಕಳಸಾ ಬಂಡೂರ ಕುಡಿಯುವ ನೀರಿನ ಯೋಜನೆ, ಯುಕೆಪಿ 3ನೇ ಹಂತದ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಹತ್ವದ ಮಾತುಕತೆ ನಡೆಸಿದ್ದಾರೆ. ಗೋವಾ ಮಾಡುತ್ತಿರುವ ವಾದ ಅತಾರ್ಕಿಕವಾದದ್ದು ಎಂದು ಹೇಳಿದ್ದಾರೆ.
ಕೃಷ್ಣಾ ನದಿ ನೀರು ಹಂಚಿಕೆ , ಸೀಮಾಂಧ್ರ – ತೆಲಂಗಾಣ ನಡುವಿನ ಸಮಸ್ಯೆಗೆ ಕರ್ನಾಟಕವನ್ನು ಹೊಣೆ ಮಾಡಬೇಡಿ. ಹೊಸ ನ್ಯಾಯಾಧಿಕರಣ ಸ್ಥಾಪನೆ ಬೇಡಿಕೆ ಸಮರ್ಥನೀಯವಲ್ಲ ಎಂದು ಜಲಶಕ್ತಿ ಸಚಿವರ ಎದುರು ಸಚಿವ ರಮೇಶ್ ಜಾರಕಿಹೊಳಿ ವಾದ ಮಂಡಿಸಿದ್ದಾರೆ.
ಕರ್ನಾಟಕದ ಪಾಲಿನ ನೀರನ್ನು ನ್ಯಾಯಯುತವಾಗಿ ಪಡೆದಿದ್ದೇವೆ. ನಮ್ಮ ಹಕ್ಕಿನ ನೀರನ್ನು ವ್ಯರ್ಥ ಮಾಡದೇ ಬಳಸಿಕೊಳ್ಳುತ್ತೇವೆ ಎಂದು ಮನವರಿಕೆ ಮಾಡುತ್ತಿರುವ ಜಲಸಂಪನ್ಮೂಲ ಸಚಿವ.