ಚೆನ್ನೈ: ಗಾನ ಗಂಧರ್ವ ಎಸ್ಪಿ ಬಾಲಸುಬ್ರಹ್ಮಣ್ಯಂ (74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು.
ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್ಹಿಲ್ ಫಾರ್ಮ್ ಹೌಸ್ನಲ್ಲಿ ಎಸ್ಪಿಬಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಎಸ್ಪಿಬಿ ಪುತ್ರ ಚರಣ್ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದಾರಾಬಾದ್ ನಿಂದ ಪುರೋಹಿತರ ಆಗಮಿಸಿತ್ತು.
ಸಿನಿಮಾ ರಂಗದ ಹಲವು ನಟ, ನಟಿಯರು, ಗಣ್ಯರು ಸೇರಿಂದರೆ ಗಾಯಕರು ಎಸ್ಪಿಬಿ ಅವರ ದರ್ಶನವನ್ನು ಪಡೆದರು. ಎಸ್ಪಿಬಿ ಹುಟ್ಟೂರು ನೆಲ್ಲೂರಿನ ಶಾಸಕ ಅನಿಲ್ ಕುಮಾರ್ ಯಾದವ್ ಆಗಮಿಸಿ ಅಂತಿಮ ದರ್ಶನ ಪಡೆದರು. ಅಲ್ಲದೇ ಆಂಧ್ರದ ನೆಲ್ಲೂರು ಜಿಲ್ಲೆಯ ಏರೂರುನಲ್ಲಿ ಮರಳಿನ ಮೇಲೆ ಎಸ್.ಪಿ.ಬಿ ಕಲಾಕೃತಿ ರೂಪಿಸಿ ಎಸ್.ಪಿ.ಬಿ.ಗೆ ಶ್ರದ್ಧಾಂಜಲಿ ನೀಡಲಾಗಿತ್ತು. ಕಲಾವಿದ ಸನತ್ ಕುಮಾರ್ ರಿಂದ ಮರಳಿನ ಕಲಾಕೃತಿ ರಚನೆ ಮಾಡಲಾಗಿತ್ತು.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್-19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕದಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ ನಿನ್ನೆ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು.
ತಮಿಳುನಾಡು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ತಿರುವಳ್ಳೂರ್ ಜಿಲ್ಲಾಡಳಿತ ಕುಟುಂಬದ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವಗಳನ್ನು ನೀಡಿ ಗೌರವಿಸಿತ್ತು. ಇದಕ್ಕೂ ಮುನ್ನ ಎಸ್ಪಿಬಿ ಅವರ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 7 ಗಂಟೆ ಯಿಂದ 11 ಗಂಟೆವರೆಗೂ ಸಾವಿರಾರು ಮಂದಿ ದರ್ಶನ ಪಡೆದರು. ತಿರುವಳ್ಳೂರ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಅಗತ್ಯ ಕಾರ್ಯಗಳ ಸಿದ್ಧತೆ ಮಾಡಿದರು. ಅಲ್ಲದೇ ಸಾವಿರಾರರು ಅಭಿಮಾನಿಗಳು ಅಂತಿಮ ದರ್ಶನ ಪಡೆಯುವ ನಿರೀಕ್ಷೆ ಇದ್ದ ಕಾರಣ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.