ಭಟ್ಕಳ: ತಾಲ್ಲೂಕಿನಲ್ಲಿ ಸೋಮವಾರ ಸಂಭವಿಸಿದ ಮೇಘಸ್ಪೋಟ ಪುರಸಭೆ ವ್ಯಾಪ್ತಿಯ ಅಂಗಡಿಕಾರರನ್ನು ಬೀದಿಗೆ ತಳ್ಳಿದೆ.
ಭಟ್ಕಳದ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯುವುದು ಸಾಮಾನ್ಯ.
ಆದರೆ ಅಂಗಡಿಗೆ ನುಗ್ಗುವುದು ವಿರಳವಾಗಿತ್ತು.
ಈ ರಸ್ತೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಬಟ್ಟೆ ಹಾಗೂ ಚಪ್ಪಲಿ ಅಂಗಡಿಗಳು ಇವೆ. ಈ ಅಂಗಡಿಗಳು ಸೋಮವಾರ ಸುರಿದ ಭಾರಿ ಮಳೆಗೆ ಸಂಪೂರ್ಣ ಜಲಾವೃತ್ತಗೊಂಡಿದ್ದವು. ಆಳೆತ್ತರದ ನೀರಿನಲ್ಲಿ ಬಟ್ಟೆ, ಚಪ್ಪಲ್ಲಿ, ಮೊಬೈಲ್, ಸೇರಿದಂತೆ ಎಲ್ಲವೂ ನೀರಿಗೆ ಆಹುತಿಯಾಗಿದೆ. ಪ್ರತಿ ಅಂಗಡಿ ಮಾಲೀಕರ ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ್ದಾರೆ.
ಕಡಿಮೆ ಬೆಲೆಗೆ ಮಾರಾಟ: ನೆರೆಹಾವಳಿಯಿಂದ ನೀರು ನುಗ್ಗಿದ ಬಟ್ಟೆ ಹಾಗೂ ಚಪ್ಪಲಿ ಅಂಗಡಿಯ ವ್ಯಾಪಾರಿಗಳು ವಸ್ತುಗಳನ್ನು ಹೋರಹಾಕಬೇಕಾದ ಸ್ಥಿತಿಯಲ್ಲಿದ್ದಾರೆ. ಒದ್ದೆಯಾದ ಬಟ್ಟೆಗಳು, ಚಪ್ಪಲಿಗಳು ದುರ್ವಾಸನೆ ಹೊಡೆಯುತ್ತಿವೆ. ಹೊಸದಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ಸ್ಥಿತಿಯಲ್ಲಿಲ್ಲ.
ತಮಗೆ ಆದ ಹಾನಿಯನ್ನು ಲೆಕ್ಕಿಸದೇ ನೀರಿನಲ್ಲಿ ಮುಳುಗಿದ ವಸ್ತುಗಳನ್ನು ಕಡಿಮೆ ಬೆಲೆಗೆ, ಸಿಕ್ಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇತ್ತ ಗ್ರಾಹಕರು ಕೂಡ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳನ್ನು ತೆಗೆದುಕೊಳ್ಳಲು ಮುಗಿಬಿದಿದ್ದಾರೆ.
ಅಂಗಡಿಕಾರರು ಲಕ್ಷಾಂತರ ಹಣ ವ್ಯಯಿಸಿ ಮಾಡಿದ ದಾಸ್ತಾನು ನೀರಿನ ಪಾಲಾಗಿದೆ. ವ್ಯಾಪಾರಿಗಳು ನೀರಿನಲ್ಲಿ ಒದ್ದೆಯಾದ ವಸ್ತುಗಳನ್ನು ಬಂದಷ್ಟು ಹಣ ಬರಲಿ ಎಂದು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ತಾಲ್ಲೂಕು ಆಡಳಿತ ಕೂಡ ಹಾನಿ ಸಮೀಕ್ಷೆ ನಡೆಸುತ್ತಿದ್ದು ಎಷ್ಟು ಪರಿಹಾರ ನೀಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಕಾದು ಕೂತಿದ್ದಾರೆ.