ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ತನಕ ಸರ್ಕಾರ ಹಾಗೂ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು, ಅಪಸ್ವರ ಎತ್ತುವವರ ಬಾಯಿಗೆ ಬೀಗ ಹಾಕಿದ್ದಾರೆ. ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಮುಖಂಡರ ಜತೆ ಬಿಜೆಪಿ ಅಧ್ಯಕ್ಷ ಜೆ.ಪಿ.
ನಡ್ಡಾ ಸಭೆ ನಡೆಸಿ ಈ ಸ್ಪಷ್ಟ ಸಂದೇಶ ನೀಡಿದ್ದಾರೆ. ಜತೆಗೆ ಸರ್ಕಾರ ಹಾಗೂ ಪಕ್ಷ ಚುರುಕಾಗಬೇಕೆಂಬ ಎಚ್ಚರಿಕೆ ಯನ್ನೂ ನೀಡಿದ್ದಾರೆ. ನಾಯಕತ್ವ ಬದಲಾವಣೆ ವಿಚಾರದಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರೈಸಿದರೂ ಸರ್ಕಾರ ಟೇಕಾಫ್ ಆಗಿಲ್ಲ. ಬಿದ್ದು ಹೋಗುವ ಸರ್ಕಾರವೆಂದೇ ಅಧಿಕಾರಿಗಳು ಮಾತನಾಡುತ್ತಿರುವುದರಿಂದ ಇಮೇಜ್ ವೃದ್ಧಿಯಾಗಿಲ್ಲ ಎಂಬ ಮಾತುಗಳಿವೆ.
ಆದ್ದರಿಂದಲೇ ವರಿಷ್ಠರು ಖಡಕ್ ಸ್ಪಷ್ಟನೆಯೊಂದಿಗೆ ಸರ್ಕಾರ ಹಾಗೂ ಪಕ್ಷಕ್ಕೂ ಚಾಟಿ ಬೀಸಿ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಮುಂದಿನ ಚುನಾವಣೆ ತನಕ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಅದಕ್ಕೆ ಎಲ್ಲರೂ ಸಜ್ಜಾಗುವಂತೆ ನಡ್ಡಾ ತಿಳಿಸಿದ್ದಾರೆ.