ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸಜ್ಜುಗೊಳಿಸುವ ಜತೆಗೆ ಸರ್ಕಾರದ ವರ್ಚಸ್ಸು ವೃದ್ಧಿಗೆ ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ 224 ಕ್ಷೇತ್ರಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆಯೇ ಕಾಣುತ್ತಿಲ್ಲವೆಂದು ಬಿಜೆಪಿ ವರಿಷ್ಠರು, ಸಂಘ ಪರಿವಾರದ ಮುಖಂಡರೇ ಆಂತರಿಕವಾಗಿ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಬದಲಾಯಿಸುವ ಉದ್ದೇಶದಿಂದ ಬೊಮ್ಮಾಯಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
ಆಡಳಿತ ಪಕ್ಷದ ಶಾಸಕರು ಈ ಬಗ್ಗೆ ಮುಖ್ಯಮಂತ್ರಿ ಮೇಲೆ ಒತ್ತಡ ತರುತ್ತಿದ್ದರು. ಜನರೆದುರು ಚುನಾವಣೆಗೆ ಹೋಗಲು ಅಭಿವೃದ್ಧಿ ಕಾರ್ಯ ಹೆಚ್ಚಾಗಿ ನಡೆಯಬೇಕೆಂಬುದನ್ನು ಪಕ್ಷದ ಗಮನಕ್ಕೂ ತಂದಿದ್ದರು. ಸಂಘ ಪರಿವಾರದ ಮುಖಂಡರು ಸಹ ಈ ನಿಟ್ಟಿನಲ್ಲಿ ಸೂಚನೆ ನೀಡಿದರೆಂದು ಮೂಲಗಳು ಹೇಳಿವೆ.
ಬಜೆಟ್ ಘೋಷಣೆ ಆದೇಶ: ಬಜೆಟ್ನಲ್ಲಿ ತಾವು ಘೋಷಿಸಿರುವ ಯೋಜನೆಗಳ ಜಾರಿಗೆ ಬೊಮ್ಮಾಯಿ ವಿಶೇಷ ಆಸಕ್ತಿ ತೋರಿಸಿದ್ದಾರೆ. ಈಗಾಗಲೇ 160 ಘೋಷಣೆ ಹೊರಬಿದ್ದಿವೆ. ಇನ್ನೂ 20ಕ್ಕೂ ಹೆಚ್ಚು ಆದೇಶಗಳು ಹೊರಬರಬೇಕಾಗಿದೆ