ಮೈಸೂರು ಭಾಗದಲ್ಲಿ ಪ್ರಬಲ ನಾಯಕರಾಗಿರುವ ಜಿ.ಟಿ ದೇವೇಗೌಡರನ್ನು(GT Devegowda) ಬಿಜೆಪಿಗೆ(BJP) ಸೆಳೆಯಲು ಕಮಲ ಪಾಳಯದಲ್ಲಿ ಭರ್ಜರಿ ಕಸರತ್ತು ನಡೆದಿದೆ.
ಈಗಾಗಲೇ ಜೆಡಿಎಸ್ನಿಂದ ಒಂದು ಕಾಲು ಹೊರಗಿಟ್ಟಿರುವ ಜಿ.ಟಿ ದೇವೇಗೌಡರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ನಿರಂತರ ಮಾತುಕತೆ ನಡೆಸುತ್ತಿವೆ. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್(ST Somashekar) ಮತ್ತು ಜಿ.ಟಿ ದೇವೇಗೌಡರು(GT Devegowda) ಮೈಸೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಸೇರಲು ಜಿ.ಟಿ ದೇವೇಗೌಡರು ಈಗಾಗಲೇ ಅನೇಕ ಷರತ್ತುಗಳನ್ನು ವಿಧಿಸಿದ್ದಾರೆ.
ನಾನು ಬಿಜೆಪಿಗೆ ಸೇರಿದರೆ ನನ್ನ ಮಗ ಹರೀಶ್ಗೌಡನಿಗೂ ಟಿಕೆಟ್ ನೀಡಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನನ್ನನ್ನು ಮಂತ್ರಿ ಮಾಡಬೇಕೆಂಬ ಬೇಡಿಕೆಯನ್ನು ಜಿ.ಟಿ ದೇವೇಗೌಡರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿಯೂ ಈ ಕುರಿತು ಚರ್ಚೆ ನಡೆದಿದೆ. ಹಳೆ ಮೈಸೂರು ಭಾಗದಲ್ಲಿರುವ ಪ್ರಬಲ ನಾಯಕರನ್ನು ಬಿಜೆಪಿಗೆ ಸೆಳೆಯುವಂತೆ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.