ದಳಪತಿಗಳ ಜೊತೆ ಮುನಿಸುಕೊಂಡು ಜೆಡಿಎಸ್ ಬಿಡಲು ಸಿದ್ದರಾಗಿರುವ ಹಾಲೀ ಶಾಸಕರ ಪರಿಸ್ಥಿತಿ ಇನ್ನೂ ತ್ರಿಶಂಕು ಸ್ಥಿತಿ. ಕಾಂಗ್ರೆಸ್ ಸೇರಲು ಬಯಸುತ್ತಿರುವ ಈ ನಾಯಕರುಗಳಿಗೆ, ಆ ಪಕ್ಷದಿಂದ ರೆಡ್ ಕಾರ್ಪೆಟ್ ವೆಲ್ಕಂ ಸಿಗುವುದು ಕಷ್ಟ ಎನ್ನುವುದು ತಾಜಾ ರಾಜಕೀಯ ಬೆಳವಣಿಗೆಗಳು.
ಇದಕ್ಕೆ ಹಲವು ಕಾರಣಗಳಿವೆ, ಒಂದು ಅವರವರು ಪ್ರತಿನಿಧಿಸುವ ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ವಿರೋಧ. ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲಿ ಇಂತಹ ವಿರೋಧವನ್ನು ಎದುರು ಹಾಕಿಕೊಳ್ಳಲು ಯಾವ ಪಕ್ಷವೂ ಬಯಸುವುದಿಲ್ಲ.
ಇವರೆಲ್ಲರೂ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಚುನಾವಣೆಗೆ ಸ್ಪರ್ಧಿಸಿದರೆ, ಆ ಭಾಗದಲ್ಲಿ ಗಣನೀಯ ಮತಬ್ಯಾಂಕ್ ಅನ್ನು ಹೊಂದಿರುವ ಜೆಡಿಎಸ್, ಇವರನ್ನು ಸೋಲಿಸಲು ಪ್ರಭಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಂತೂ ಹೌದು.
ಹಾಗಾಗಿ, ಜೆಡಿಎಸ್ ಬಿಡಲು ಸಿದ್ದರಾಗಿರುವ ಶಾಸಕರುಗಳಿಗೆ ಕಾಂಗ್ರೆಸ್ಸಿನಿಂದ ಯಾವುದೇ ಖಚಿತ ಭರವಸೆ ಸಿಗುತ್ತಿಲ್ಲ ಎನ್ನುವುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಇದರಲ್ಲಿ, ಹಾಲೀ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ಜಿ.ಟಿ. ದೇವೇಗೌಡ ಕೂಡಾ ಒಬ್ಬರು.