ಉಡುಪಿ: ಕಾಪು ನಲ್ಲಿ ಮಾರಿಗುಡಿ ದೇವಾಲಯದ ಅಧಿಕಾರಿಗಳು ಸುಗ್ಗಿ ಮಾರಿ ಪೂಜೆ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡುವುದಕ್ಕೆ ನಿರ್ಧರಿಸಿರುವ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಾ.22 ಹಾಗೂ 23 ರಂದು ಕಾಪುವಿನಲ್ಲಿ ಮಾರಿಗುಡಿ ದೇವಾಲಯದ ವಾರ್ಷಿಕವಾಗಿ ನಡೆಯುವ ಸುಗ್ಗಿ ಮಾರಿ ಪೂಜೆ ನಡೆಯಲಿದೆ.
ಉಡುಪಿಯಲ್ಲಿ ವರದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಭಾರತ ಮುಕ್ತವಾದ ದೇಶ, ಈ ರೀತಿ ಬೆದರಿಕೆ ಹಾಕುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡುತ್ತೇವೆ ಎಂಬ ನೀತಿಯ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೇವಾಲಯಗಳ ಕಾರ್ಯಕ್ರಮಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಮಳಿಗೆಗಳನ್ನು ನೀಡುವ ಪದ್ಧತಿಯನ್ನು ಕರಾವಳಿ ಹಾಗೂ ಮಲೆನಾಡು ಭಾಗಗಳ ಹಲವು ದೇವಾಲಯಗಳಲ್ಲಿ ಅನುಸರಿಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ವರದಿಗಾರರು ಸಿದ್ದರಾಮಯ್ಯ ಅವರಲ್ಲಿ ಪ್ರತಿಕ್ರಿಯೆ ಕೇಳಿದ್ದರು.
ಕೇವಲ ಹಿಂದೂಗಳಿಗೆ ಮಾತ್ರ ಅವಕಾಶ ನೀಡುತ್ತಿರುವುದಕ್ಕೆ ಸಿದ್ದರಾಮಯ್ಯ ಆಕ್ಷೇಪವಷ್ಟೇ ವ್ಯಕ್ತಪಡಿಸಿದ್ದು, ಯಾವುದೇ ಬಲಪಂಥೀಯ ಸಂಘಟನೆಗಳನ್ನೂ ದೂಷಿಸಿಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.