ವಿಜಯಪುರ: ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು ಉಳಿಯದಂತೆ ಆದ್ಯತೆ ಮೇಲೆ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳ ಮೂಲಕ ಕಟಾವು ಮಾಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ರೈತರು ತಾವು ಬೆಳೆದ ಕಬ್ಬು ಕಟಾವು ಆಗುವುದಿಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.
ಕಾರಣ ಎಲ್ಲ ಸಕ್ಕರೆ ಕಾರ್ಖಾನೆಯವರು ಯಾವುದೇ ರೈತರ ಕಬ್ಬು ಉಳಿಯದಂತೆ ಎಲ್ಲ ರೈತರ ಕಬ್ಬನ್ನು ಆದ್ಯತೆ ಮೇಲೆ ಕಟಾವು ಮಾಡಲು ಸೂಚಿಸಿದರು.
ಲಗಾಣಿ ಕುರಿತು ಪರಿಹಾರ ಕೈಗೊಳ್ಳಬೇಕು. ಲಗಾಣಿಗೆ ಸಂಬಂಧಿಸಿದಂತೆ ಕಟಾವು ಗ್ಯಾಂಗ್ಗಳಿಗೆ ಮತ್ತು ಕಬ್ಬು ಕಟಾವು ಮೇಲುಸ್ತುವಾರಿ ಮಾಡುತ್ತಿರುವ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಿದರು.
ಯಾವುದೇ ರೈತರಿಂದ ಕಟಾವಿಗೆ ಹಾಗೂ ಹಣ ಪಾವತಿಗೆ ಸಂಬಂಧಿಸಿದಂತೆ ದೂರುಗಳು ಬರದಂತೆ ನೋಡಿಕೊಳ್ಳಬೇಕು. ದೂರುಗಳು ಪುನರಾವರ್ತನೆಗೊಂಡರೆ ಸೂಕ್ತಕ್ರಮ ಕೈಗೊಳ್ಳಲು ಕಬ್ಬು ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಎಸ್ಆರ್ ಅಕೌಂಟಿಗೆ ಹಣ ಸಂದಾಯದ ಮಾಹಿತಿ ಸಲ್ಲಿಸುವ ಕುರಿತು ಸಿಎಸ್ಆರ್ ಅನುದಾನದಡಿ ಶೇ 2 ರಷ್ಟು ಹಣವನ್ನು ಅಕೌಂಟಿಗೆ ಸಂದಾಯ ಮಾಡಿದ ಕುರಿತು ಮಾಹಿತಿಯನ್ನು ಒದಗಿಸಲು ಸೂಚಿಸಲಾಯಿತು.