ಧಾರವಾಡ: ಉಳವಿ ಜಾತ್ರೆಯಿಂದ ಧಾರವಾಡಕ್ಕೆ ಎತ್ತಿನ ಚಕ್ಕಡಿ ಕೇವಲ 13 ಗಂಟೆಯಲ್ಲಿ 135 ಕಿಲೋ ಮೀಟರ್ ಬಂದಿದ್ದು, ಅವುಗಳಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.
ಎತ್ತಿನ ಚಕ್ಕಡಿಗಳನ್ನ ತೆಗೆದುಕೊಂಡು ಜಾತ್ರೆಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಗ್ರಾಮೀಣ ಪ್ರದೇಶಗಳಲ್ಲಿ ಚಕ್ಕಡಿಗೆ ಕೊಲ್ಲಾರಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಪದ್ಧತಿ ಇನ್ನೂ ಜೀವಂತವಾಗಿದೆ. ಜಾತ್ರೆಗೆ ಅನೇಕರು ಟ್ರ್ಯಾಕ್ಟರ್, ಬೈಕ್ ತೆಗೆದುಕೊಂಡು ಹೋಗುತ್ತಾರೆ. ಆದರೆ ಧಾರವಾಡದ ಎರಡು ಎತ್ತುಗಳು ಉತ್ತರ ಕನ್ನಡ ಜಿಲ್ಲೆಯ ಉಳವಿ ಜಾತ್ರೆಯಿಂದ ಧಾರವಾಡಕ್ಕೆ 13 ಗಂಟೆಯಲ್ಲಿ ಬಂದು ಸೈ ಎನಿಸಿಕೊಂಡಿವೆ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಮುತ್ತು ಬ್ಯಾಳಿ ರೈತರಿಗೆ ಸೇರಿದ ಜೋಡೆತ್ತುಗಳು. ಇವು 135 ಕಿಲೋ ಮೀಟರ್ ದೂರದ ಉಳವಿಯಿಂದ ಕೇವಲ 13 ಗಂಟೆಗಳಲ್ಲಿ ಧಾರವಾಡದ ಮಂಗಳಗಟ್ಟಿ ಗ್ರಾಮಕ್ಕೆ ಬಂದು ತಲುಪಿವೆ. ಈ ಚಕ್ಕಡಿ ಅಲ್ಲಿಂದ ಖಾಲಿ ಬಂದಿಲ್ಲ.
ಜಾತ್ರೆ ಮುಗಿಸಿಕೊಂಡು ಕಡಿಮೆ ಅವಧಿಯಲ್ಲಿ 135 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಊರಿಗೆ ಬಂದ ಎತ್ತುಗಳನ್ನು ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಂಡರು. ಹೆಂಗಳೆಯರು ಜೋಡೆತ್ತುಗಳಿಗೆ ಆರತಿ ಬೆಳಗಿದರು. ಅಲ್ಲದೆ ಎತ್ತನ್ನು ಡಿಜೆ ಹಾಕಿ ಮೆರವಣಿಗೆ ಮಾಡಿದ್ದು, ಯುವಕರು ಆ ಸಾಂಗ್ ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.