Breaking News
Home / ರಾಜಕೀಯ / ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್​ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!

ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್​ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!

Spread the love

ತುರುವೇಕೆರೆ ಪೊಲೀಸ್ ಠಾಣೆ ಮುಂದೆ ನಿಂತಿರುವ ಎಸ್​ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರ ಕಾರು ಮತ್ತು ಪಿಎಸ್​ಐ ಶಿವಲಿಂಗಯ್ಯ

ಇಷ್ಟಕ್ಕೂ ಈ ಪ್ರಕರಣ ಏನು ಅಂತಂತಂದ್ರೆ… ಅದು ಆಗಸ್ಟ್ 28 , 2021 ರಂದು ದಾಖಲಾಗಿದ್ದ ಪ್ರಕರಣ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಾಗೇಂದ್ರಪ್ಪ ಹಾಗೂ ಪಕ್ಕದ ಮನೆಯ ಚಂದನ್, ಶಿವಪ್ರಕಾಶ್ ನಡುವೆ ಮಾಮೂಲಿ ಸಣ್ಣ ಮಟ್ಟದ ಜಗಳ ನಡೆದಿತ್ತು. ಮನೆ ಮುಂದೆ ಕೊಬರಿ ಮೊಟ್ಟೆ ಹಾಕಿದ್ದಕ್ಕೆ ಶುರುವಾಗಿದ್ದ ಜಗಳ, ಕೊನೆಗೆ ಗಂಭೀರವಾಗಿ ಕೆಲವರಿಗೆ ಗಾಯಗಳಾಗುವ ಮಟ್ಟಕ್ಕೆ ಹೋಗಿತ್ತು. ಸ್ವಲ್ಪ ಯಾಮಾರಿದ್ದರೂ ಒಬ್ಬರ ಅಥವಾ ಇಬ್ಬರ ಪ್ರಾಣ ಹಾರಿಹೋಗ್ತಿತ್ತು ಎನ್ನಲಾಗಿದೆ. ಆದರೆ ಮುಂದೆ ಇನ್ನೂ ಸ್ಟೋರಿ ಇದೆ ಓದಿ.

ಕೊಬರಿ ಮೊಟ್ಟೆ ಹಾಕಿದ್ದಕ್ಕೆ ನಾಗೇಂದ್ರಪ್ಪ ಹಾಗೂ ಪತ್ನಿ ಶಿವಮ್ಮಳಿಗೆ ಪಕ್ಕದ ಮನೆಯ ಚಂದನ್, ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದರಂತೆ. ಈ ವೇಳೆ ನಾಗೇಂದ್ರಪ್ಪ ಶಿವಮ್ಮಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ಗಂಭೀರ ಗಾಯದ ಸ್ವರೂಪ ತಿಳಿದ ವೈದ್ಯರು ಇದು ಮಾರಣಾಂತಿಕ ಹಲ್ಲೆ ಅಂತಾ ವರದಿ ನೀಡಿದ್ದಾರೆ. ಇದನ್ನ ಪಡೆದ ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆಗೆ 307 ಕೊಲೆ ಪ್ರಯತ್ನ ಕೇಸ್ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸದೇ ಸಪೋರ್ಟ್ ಮಾಡಿಕೊಂಡು ಬಂದಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಶಿವಪ್ರಕಾಶ್ ಎಂಬ ಆರೋಪಿ ಒಂದು ತಿಂಗಳ ಬಳಿಕ ಬೇಲ್ ಪಡೆದೊಕೊಂಡಿದ್ದ.

ಈ ಬಗ್ಗೆ ನಾಗೇಂದ್ರಪ್ಪ ಹಾಗೂ ಕುಟುಂಬಸ್ಥರು ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಕೊನೆಗೆ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರಿಗೆ ನಿನ್ನೆ ಈ ಬಗ್ಗೆ ದೂರು ನೀಡಿದ್ದಾರೆ. ಕೂಡಲೇ ದೂರವಾಣಿ ಕರೆ ಮಾಡಿದ ಎಸ್ ಪಿ ರಾಹುಲ್ ಅವರು ದಂಡಿನಶಿವರ ಪಿಎಸ್ ಐ ಶಿವಲಿಂಗಯ್ಯಗೆ ಆರೋಪಿಗಳನ್ನ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸುವಂತೆ ಖಡಕ್ಕಾಗಿ ಆಜ್ಞಾಪಿಸಿದ್ದಾರೆ. ಖುದ್ದು ಜಿಲ್ಲೆಯ ಮೊದಲ ಪೊಲೀಸ್​ ಅಧಿಕಾರಿಯೇ ಹೇಳಿದ ಮೇಲೆ ಕೆಳಹಂತದವರು ಏನು ಮಾಡ್ತಾರೆ… ಶಿರಸಾವಹಿಸಿ ಆಜ್ಞೆಯನ್ನು ಪಾಲಿಸಬೇಕು ಅಷ್ಟೆ.

ಆದರೂ ಪಿಎಸ್ ಐ ಶಿವಲಿಂಗಯ್ಯ ಇಂದೂ ಸಹ ಆರೋಪಿಗಳನ್ನ ಬಂಧಿಸುವ ಸಾಹಸಕ್ಕೆ ಕೈಹಾಕಿರಲಿಲ್ಲ. ಈ ಬಗ್ಗೆ ನಾಗೇಂದ್ರಪ್ಪ ಪೊಲೀಸರನ್ನ ಕೇಳಿದ್ದಕ್ಕೆ ನೀವು ಇಲ್ಲಿಗೆ ಬಾಡಿಗೆ ಕಾರು ಮಾಡಿಕೊಂಡು ಬನ್ನಿ ಸಿಬ್ಬಂದಿ ಕಳಿಸ್ತೀವಿ, ಹೋಗಿ ಆರೋಪಿಯನ್ನ ಹಿಡಿದು ತನ್ನಿ ಅಂತಾ ಅದೇ ಬೇಜಬ್ದಾರಿ ಪೊಲೀಸಪ್ಪನ ವರಸೆ ತೋರಿದರಂತೆ.

ನಖಶಿಖಾಂತ ಉರಿದುಹೋದ ದೂರದಾರ ನಾಗೇಂದ್ರಪ್ಪ ಅವರು ಕುಟುಂಬಸ್ಥರ ಸಮೇತ ನೇರನೇರ ಮತ್ತೆ ತುಮಕೂರು ಎಸ್ ಪಿ ಕಚೇರಿ ಮುಂದೆ ಹಾಜರಾಗಿದ್ದಾರೆ. ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಇದಕ್ಕೆ ಎಸ್ ಪಿ ರಾಹುಲ್ ಅವರ ರಿಯಾಕ್ಷನ್​ ಹೇಗಿರಬಹುದು ಒಮ್ಮೆ ಊಹಿಸಿಕೊಳ್ಳಿ. ಮೈ ಹೂ ನಾ ಎಂದವರೇ ತಮ್ಮ ಸರ್ಕಾರಿ ಕಾರಿನಲ್ಲಿ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನ ಕುಳಿತುಕೊಳ್ಳುವಂತೆ ಹೇಳಿ, ತಮ್ಮ ಕಾರು ಚಾಲಕನಿಗೆ ಕರೆದು ಇವರನ್ನು ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ ಎಂದಿದ್ದಾರೆ.

ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಂದ ಎಸ್​ಪಿ ರಾಹುಲ್​ ಅವರ ರಥ, ಠಾಣೆ ಮುಂಭಾಗದಲ್ಲಿ ನಿಂತಿದೆ. ಕಾರು ಬಂದಿದ್ದನ್ನ ಕಂಡು, ಅದೂ ಎಸ್​ಪಿ ಕಾರು ಕಂಡು ಪಿಎಸ್ ಐ ಶಿವಲಿಂಗಯ್ಯ ನಿಜಕ್ಕೂ ಹೌಹಾರಿದ್ದಾರೆ. ಇಡೀ ಠಾಣೆಗೂ ಶಾಕ್ ಆಗಿದೆ! ಕೂಡಲೇ ಎಸ್ ಪಿಗೆ ಕರೆ ಮಾಡಿದ ಪಿಎಸ್ ಐ ಸಾಹೇಬ ‘ಸರ್ ಹೀಗೆ ಹೇಳಲು ಹೇಳಿದ್ದೇ ತುರುವೇಕೆರೆ ಸಿಪಿಐ ನವೀನ್ ಸರ್’ ಅಂತಾ ದುಂಬಾಲು ಬಿದ್ದಿದ್ದಾರೆ.

ಈ ಹಿಂದೆ ಬಂಧಕ್ಕೊಳಗಾಗಿ ಜಾಮೀನು ಪಡೆದಿರುವ ಶಿವಪ್ರಕಾಶ್ ಮತ್ತು ಇಂದು ಬೆಳಗಿನ ಜಾವ ಬಂಧನಕ್ಕೀಡಾದ ಚಂದನ್

ಇದನ್ನ ಕೇಳಿದ ಖಡಕ್​ ಅಧಿಕಾರಿ ಎಸ್​ಪಿ ರಾಹುಲ್ ಮತ್ತೆ ತಮ್ಮ ಕಾರು ಚಾಲಕನ ಜೊತೆ ಮಾತನಾಡಿ ಕಾರನ್ನು ದಂಡಿನಶಿವರ ಪೊಲೀಸ್ ಠಾಣೆಯಿಂದ ನೇರವಾಗಿ ತುರುವೇಕೆರೆ ಸಿಪಿಐ ಕಚೇರಿ ಮುಂಭಾಗ ತಂದು ನಿಲ್ಲಿಸುವಂತೆ ಸೂಚಿಸಿದ್ದಾರೆ. ಸದ್ಯ ಸಿಪಿಐ ಕಚೇರಿ ಬಳಿ ಎಸ್ ಪಿ ಕಾರು ನಿಂತಿದ್ದು ದೊಡ್ಡ ಪ್ರಸಂಗವೇ ನಡೆದುಹೋಗಿದೆ. ಇಷ್ಟಕ್ಕೂ ಇಷ್ಟೆಲ್ಲ ರಾದ್ಧಾಂತಗಳಿಗೆ ಏನಪ್ಪಾ ಕಾರಣ ಎಂದು ಗುಮಾನಿಗೊಂಡು ನೋಡಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಹಲ್ಲೆ ಪ್ರಕರಣದ ಆರೋಪಿಗಳು ಸಿಪಿಐ ನವೀನ್ ಸಾಹೇಬರ ಸಾಕ್ಷಾತ್​ ಸಂಬಂಧಿಗಳು ಎಂದು ತಿಳಿದುಬಂದಿದೆ. ಅಲ್ಲಿಗೆ ಬಂಧುಪ್ರೇಮ ಮೆರೆದ ಸರ್ಕಲ್​ ಇನ್ಸ್​ಪೆಕ್ಟರ್​ ನವೀನ್​ಜೀ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದರು ಎಂಬುದು ಬಟಾಬಯಲಾಗಿದೆ.


Spread the love

About Laxminews 24x7

Check Also

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ!

Spread the love ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ! ಲೋಕಸಭಾ ಚುನಾವಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ