ಬೆಂಗಳೂರು, ಆ.20-ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದರೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ? ನಿಶಕ್ತವಾಗಿರುವ ಲಕ್ಷಣವೋ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು “ಪೋಜು” ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ ಎಂದಿದ್ದಾರೆ.
ಕೊರೋನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದರೆ ಹೊರತು ಅನುಷ್ಠಾನದಲ್ಲಿ ಮಕಾಡೆ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಿದೆ.
ಕೊರೋನಾ ಸೋಂಕಿತರು ಬೆಡ್ ಗಳಿಲ್ಲದೆ, ಅಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕೊರೋನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು? ಕಮೀಷನ್ ದಂಧೆ, ಸಮನ್ವಯದ ಕೊರತೆಯಿಂದ ಬಳಲಿ ಹೈರಾಣಾದಿರಿ ಎಂದು ಆರೋಪಿಸಿದ್ದಾರೆ.
ಅಧಿಕಾರ ಇದ್ದಾಗಲೂ ಕೊಟ್ಟ ಮಾತು ಉಳಿಸಿ ಕೊಳ್ಳಲಾಗದವರ ಹಾಗೂ ರೋಗಗ್ರಸ್ತ ಮನಸ್ಸಿನವರ ಬಗ್ಗೆ ನನಗೆ ಮರುಕವಿದೆ. ಪತ್ರಿಕಾಗೋಷ್ಠಿ ಕರೆಯದೆ ಈ ದಿನ ಪತ್ರಿಕಾಗೋಷ್ಠಿ ಇರುವುದಿಲ್ಲ ಎಂದು ಸ್ಪಷ್ಟನೆ ನೀಡುವ ಬೌದ್ಧಿಕ ದಾರಿದ್ರ್ಯ ನಿಮ್ಮಂತೆ ನನಗೆ ಬಂದೊದಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನುಡಿಯಲುಬಾರದು ಕೆಟ್ಟನುಡಿಗಳ
ನಡೆಯಲುಬಾರದು ಕೆಟ್ಟನಡೆಗಳ
ನುಡಿದಡೇನು ನುಡಿಯದಿರ್ದಡೇನು?
ಹಿಡಿದವ್ರತ ಬಿಡದಿರಲು ಅದೆ
ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ ಎಂದು ಮುಕ್ತಾಯಕ್ಕ ಅವರ ವಚನಗಳನ್ನು ಉಲ್ಲೇಖಿಸಿದ್ದಾರೆ