ಶಿವಮೊಗ್ಗ: ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನೂತನ ತಂತ್ರಗಾರಿಕೆ ಬಳಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ಗಾಂಜಾ ಸಹಿತ ಎಲ್ಲಾ ವಸ್ತುಗಳೂ ಸಿಗುತ್ತಿವೆ. ಅಲ್ಲಿಂದಲೇ ಕರೆ ಮಾಡಿ ಸಾರ್ವಜನಿಕರಿಗೆ, ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಇತ್ತು. ಹಾಗಾಗಿ ಪರಪ್ಪನ ಅಗ್ರಹಾರದಲ್ಲಿ ವಿಮಾನ ನಿಲ್ದಾಣಗಳಲ್ಲಿ ಇರುವಂತಹ ತಪಾಸಣಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲಿನ ಸಿಬ್ಬಂದಿಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಏಜೆನ್ಸಿಯನ್ನೇ ನಿಯುಕ್ತಿ ಮಾಡಲಾಗಿದೆ ಎಂದರು.
ಇನ್ನು ಪರಪ್ಪನ ಅಗ್ರಹಾರಕ್ಕೆ ಬರುವ ದಿನಸಿ ಸಾಮಗ್ರಿಗಳಲ್ಲೇ ಅಕ್ರಮ ವಸ್ತುಗಳನ್ನು ಸಾಗಿಸಲಾಗುತ್ತದೆ ಎಂಬ ಮಾಹಿತಿ ಕೂಡಾ ಇತ್ತು. ಹಾಗಾಗಿ ದಿನಸಿ ವಸ್ತುಗಳನ್ನು ಜೈಲಿನ ಪ್ರವೇಶದಲ್ಲೇ ಇಳಿಸಲಾಗುತ್ತದೆ. ಬಳಿಕ ಅಲ್ಲಿ ಪರಿಶೀಲನೆ ನಡೆಸಿ ಬಳಕೆಗೆ ನೀಡಲಾಗುತ್ತಿದೆ. ಇದರಿಂದ ಖೈದಿಗಳಿಗೆ ತಲೆನೋವು ಎದುರಾಗಿದೆ ಎಂದರು.