ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ವಿರುದ್ಧ ಕೇಳಿ ಬಂದಿರುವ 210 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪವನ್ನು ತಿರಸ್ಕರಿಸಿದ್ದು, ತಮ್ಮ ಮೇಲಿನ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಹಿರೇಕೆರೂರಿನ ಸ್ವ-ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್ ಅವರು, ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾದದ್ದು. ನಮ್ಮ ಇಲಾಖೆಯಲ್ಲಿ ಮೈಕ್ರೋ ಇರಿಗೇಶನ್ ಇರಬಹುದು ಮ್ಯಾಕಿನಿಷನ್ ಇರಬಹುದು ಅತ್ಯಂತ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಕೃಷಿ ಇಲಾಖೆ ಮಾತ್ರ ರಾಜ್ಯ ಸರ್ಕಾರದಲ್ಲಿ ಎಲ್ಲದರಲ್ಲೂ ಪಾರದರ್ಶಕ ಹೊಂದಿದೆ.
ಸಂಪೂರ್ಣ ರಾಜ್ಯ ಸರ್ಕಾರದ ಹಣ, ರೈತರ ಸಬ್ಸಿಡಿ ಹಣ, ಕಂಪನಿಗಳ ಹಣ ಡಿಬಿಟಿಪಿ ಮೂಲಕ ಹೋಗುತ್ತದೆ. ಇವತ್ತು ಯಾಂತ್ರೀಕರಣ ಮತ್ತು ಮೈಕ್ರೋ ಇರಿಗೇಶನ್ ನಲ್ಲಿ ರೈತರ ನೇರವಾಗಿ ತಮಗೆ ಬೇಕಾದ ಕಂಪನಿಗಳನ್ನ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕು ರಾಜ್ಯ ಸರ್ಕಾರ ನೀಡಿದೆ. ನೇರವಾಗಿ ಆನ್ಲೈನ್ ಮೂಲಕ ರೈತರು ತಮ್ಮ ಶೇರನ್ನು ರೈತರು ಕಟ್ಟುತ್ತಾರೆ. ಇದಾದ ಬಳಿಕ ರೈತರು ವರ್ಕ್ ಆರ್ಡರ್ ಕೊಡ್ತಾರೆ. ನಂತರ ಯಂತ್ರೋಪಕರಣಗಳನ್ನು ಜಿಪಿಎಸ್ ಮೂಲಕ ಅಧಿಕಾರಿಗಳಿಂದ ವೆರಿಪಿಕೇಶನ್ ಆಗಿ ಸರ್ಕಾರಕ್ಕೆ ಬರುತ್ತದೆ. ನಂತರ ನೇರವಾಗಿ ಈ ಹಣ ಖಜಾನೆ ಮೂಲಕ ಕಂಪನಿಗಳಿಗೆ ಹೋಗುತ್ತದೆ ಅಷ್ಟೇ. ಇದನ್ನು ದುರುದ್ದೇಶದಿಂದ ಬೇಕು ಅಂತಾ ಮಾಡಿರೋದು. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲಾ. ಯಾವ ವಿಚಾರಣೆ ಬೇಕಾದರೂ ಮಾಡಿಕೊಳ್ಳಲಿ ಅದಕ್ಕೆ ಇಲಾಖೆ ಸಂಪೂರ್ಣ ಸಹಕಾರ ಕೊಡುತ್ತದೆ. ವಿಚಾರಣೆಗೆ ಬಂದಾಗ ಸಹಕಾರ ಕೊಡ್ತೇವಿ.