ನವದೆಹಲಿ: ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿ ಇಂದಿಗೆ ಒಂದು ವಾರವಾಗ್ತಿದೆ. ಒಡಲಾಳದಲ್ಲಿ ಸಾಕಷ್ಟು ನೋವು, ಹತಾಶೆ, ವಿಕೃತಿಯ ಹುದುಗಿಸಿಕೊಂಡಿರುವ ಆ ದೇಶದಲ್ಲೀಗ ನರರಾಕ್ಷಸರದ್ದೇ ಪಾರುಪತ್ಯ.. ಆದ್ರೆ, ಇವೆಲ್ಲಾ ಅಮಾನವೀಯತೆಯ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡ ಇದೆ ಅಂತಾ ಹೇಳಲಾಗ್ತಿತ್ತು.. ಬಟ್ ಈಗ ಅದು ಕನ್ಫರ್ಮ್ ಆಗಿದೆ.
ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಬೆಟ್ಟ ಗುಡ್ಡಗಳ ದೇಶ ಅಫ್ಘಾನಿಸ್ತಾನ ತತ್ತರಿಸಿ ಹೋಗ್ತಿದೆ. ಇವತ್ತಿಗೆ ಸರಿಯಾಗಿ ಒಂದು ವಾರದ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಕೈವಶ ಮಾಡಿಕೊಂಡ್ರು. ಇದೆಲ್ಲಾ ಅವಾಂತರಕ್ಕೆ ಅಮೆರಿಕ ತನ್ನ ಸೇನೆಯನ್ನು ಹಿಂದೆ ಕರೆಸಿಕೊಂಡಿದ್ದೇ ತಪ್ಪು ಅಂತಾ ಹಲವರು ಆರೋಪಿಸುತ್ತಿದ್ದಾರೆ. ಆದ್ರೆ, ಅವೆಲ್ಲಾ ಆರೋಪಗಳ ಮಧ್ಯೆ ಅಫ್ಘಾನ್ ಅರಾಜಕತೆಯ ಹಿಂದೆ ಪಾಕಿಸ್ತಾನದ ಗೊಸುಂಬೆ ಗುಪ್ತಚರ ಸಂಸ್ಥೆ ISI ಇರೋದು ಬಟಾಬಯಾಲಾಗಿದೆ.
ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?
ತಾಲಿಬಾನ್ ಜೊತೆ ಕಾಣಿಸಿಕೊಂಡ ಐಎಸ್ಐ ಚೀಫ್!
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಖಚಿತವಾಗುತ್ತಿದ್ದಂತೆಯೇ ಅತ್ತ ಪಾಕಿಸ್ತಾನದ ಗುಪ್ತಚರ ಇಲಾಖೆ ತಾಲಿಬಾನಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಸ್ಫೋಟಕ ಮಾಹಿತಿಯನ್ನು ನಮ್ಮ ಗುಪ್ತಚರ ಇಲಾಖೆ ಹೊರ ಹಾಕಿತ್ತು. ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ತಾಲಿಬಾನ್ ಮುಖಂಡರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿತ್ತು.. ಆದ್ರೆ, ಅವೆಲ್ಲ ಊಹಾಪೋಹಗಳು ಈಗ ಸತ್ಯವಾಗಿದೆ.. ತಾಲಿಬಾನ್ ಜೊತೆ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಕಾಣಿಸಿಕೊಂಡಿರೋ ಫೋಟೋ ಬಯಲಾಗಿದೆ.
ತಾಲಿಬಾನ್ ಜೊತೆಗೆ ISI!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚನೆಯ ತಾಲೀಮಿನಲ್ಲಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಐಎಸ್ಐ ಮುಖ್ಯಸ್ಥ ಹಮೀದ್ ಫೈಜ್ ಕಳ್ಳಾಟ ಬಯಲಾಗಿದ್ದು, ತಾಲಿಬಾನ್ ನಾಯಕರ ಭೇಟಿ ಮಾಡಿರುವ ಫೋಟೋ ಹೊರಬಿದ್ದಿದೆ. ಇನ್ನು, ಹಮೀದ್ ಫೈಜ್ ಕಂದಹಾರ್ನಲ್ಲಿ ತಾಲಿಬಾನಿಗಳನ್ನ ಭೇಟಿ ಮಾಡಿದ್ದಾನೆ ಎನ್ನಲಾಗಿದ್ದು, ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಂತಲೇ ಬಿಂಬಿತವಾಗಿರುವ ಮುಲ್ಲಾ ಅಬ್ದುಲ್ಲಾ ಘನಿ ಬರಾದರ್ ಜೊತೆಗೆ ಚರ್ಚೆ ನಡೆಸಿದ್ದಾನೆ. ಇನ್ನು, ತಾಲಿಬಾನಿಗಳ ಜೊತೆಗೆ ಹಮೀದ್ ಫೈಜ್ ನಮಾಜ್ ಮಾಡುತ್ತಿರುವ ಫೋಟೋ ಲೀಕ್ ಆಗಿದ್ದಿ, ಪಾಕ್ ಸರ್ಕಾರ ಹಾಗೂ ತಾಲಿಬಾನ್ ನಡುವಿನ ಸ್ನೇಹ ಸಂಬಂಧಕ್ಕೆ ಐಎಸ್ಐ ಸೇತುವೆಯಾಗಿರೋದು ಬಯಲಾಗಿದೆ. ಇನ್ನು, ಸರ್ಕಾರ ರಚನೆಯ ಸರ್ಕಸ್ನಲ್ಲಿರುವ ತಾಲಿಬಾನಿಗಳ ಭೇಟಿಗಾಗಿ, ಇಂದು ಕಾಬೂಲ್ಗೆ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭೇಟಿ ನೀಡುವ ಸಾಧ್ಯತೆ ಇದ್ದು, ಸರ್ಕಾರ ರಚನೆ ಹಾಗೂ ಮುಂದಿನ ಬಾಂಧವ್ಯದ ಬಗ್ಗೆ ಚರ್ಚಲಿಸಿದ್ದಾನೆ ಎನ್ನಲಾಗಿದೆ.
ಈ ಹಿಂದೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಶಿಬಿರಗಳು ಇದ್ದವು ಎಂಬುದನ್ನು ನಾವು ಮರೆಯುವ ಹಾಗಿಲ್ಲ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಕಬ್ಜಾ ಮಾಡುವ ತನಕ ಸೈಲೆಂಟ್ ಆಗಿದ್ದ ಪಾಕಿಸ್ತಾನದ ನರಿಬುದ್ಧಿ ಈಗ ಮತ್ತೆ ಬಯಲಾಗಿದ್ದು, ಎಷ್ಟು ಉಜ್ಜಿದ್ರೂ ಕಾಗೆಬಣ್ಣ ಕಪ್ಪೇ ಅನ್ನೋದನ್ನ ಸಾಬೀತುಪಡಿಸಿದೆ. ಹಾವಿಗೆ ಹಾಲೆರೆದು ಪೋಷಿಸುವಂತೆ ಉಗ್ರರನ್ನು ಪೋಷಿಸುವ ಐಎಸ್ಐ ಈಗ ತಾಲಿಬಾನಿಗಳ ಜೊತೆಗೂ ಕೈಜೋಡಿಸಿದ್ದು, ಭಾರತಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಜಾಗರೂಕರಾಗಿರಬೇಕು.