ರಾಯಚೂರು: ಕಲಿಯುಗದ ಕಾಮಧೇನು.. ಬೇಡಿದ ವರ ಕರುಣಿಸೋ.. ತುಂಗಾ ತೀರದಿ ನೆಲೆಸಿದ ಪ್ರಭು, ಶ್ರೀ ರಾಘವೇಂದ್ರ ಸ್ವಾಮಿಗಳು. ಸದಾ ಭಕ್ತಿಯ ಝೇಂಕಾರ ತುಂಬಿ ತುಳುಕೋ ರಾಯರ ಸನ್ನಿಧಿಯಲ್ಲಿ ನಿನ್ನೆಯಿಂದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೀತಾ ಇದೆ. ಸ್ವಾಮಿಯ ಭಕ್ತಗಣ ತುಂಗೆಯಲ್ಲಿ ಮಿಂದೆದ್ದು ರಾಯರ ದರ್ಶನ ಪಡೆದು ಪುನೀತರಾದ್ರು.
ರಾಯರ ಆವರಣದಲ್ಲಿ ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ.. ವಿವಿಧ ವಾದ್ಯಗಳಿಂದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಭಕ್ತಿಯ ಝೇಂಕಾರ.. ತುಂಗಾ ತೀರದಲ್ಲಿ ನೆಲೆಸಿರೋ ಪವಾಡ ಪುರುಷರ ಶಕ್ತಿಯ ಸ್ಥಳದಲ್ಲಿ ನಿನ್ನೆ ಭಕ್ತಿ ಮತ್ತಷ್ಟು ತುಂಬಿತ್ತು. ಕಾರಣ ರಾಯರ ಆರಾಧನಾ ಮಹೋತ್ಸವವಿತ್ತು.
ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ನಿನ್ನೆಯಿಂದ ಶುರುವಾದ ಈ ಮಹೋತ್ಸವ 7 ದಿನಗಳ ಕಾಲ ನಡೆಯಲಿದೆ. ಇದೇ ಕಾರಣಕ್ಕೆ ಮಂತ್ರಾಲಯ ದೇವಸ್ಥಾನದ ಆವರಣ ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಲಾಗಿತ್ತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನಿನ್ನೆ ಸಂಜೆ ಗೋ ಪೂಜೆ ಬಳಿಕ ಧ್ವಜಾರೋಹಣ ನೇರವೇರಿಸಿ ಮಹೋತ್ಸವಕ್ಕೆ ಚಾಲನೆ ಕೊಟ್ರು. 23 ರಂದು ಪೂರ್ವಾರಾಧನೆ, 24ರಂದು ಮಧ್ಯಾರಾಧನೆ, 25ರಂದು ಉತ್ತರರಾಧನೆ ನಡೆಯಲಿದ್ದು, ಏಳು ದಿನಗಳ ಕಾಲವೂ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.
ದೇಶದ ಮೂಲೆಮೂಲೆಯಲ್ಲೂ ಸಹಸ್ರಾರು ಭಕ್ತರಿದ್ದು, ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಮಿನಿ ಏರ್ಪೋರ್ಟ್ ನಿರ್ಮಾಣಕ್ಕೆ ಮಠದ ಆಡಳಿತ ಮಂಡಳಿ ತೀರ್ಮಾನಿಸಿದೆ. ಭಕ್ತಾಧಿಗಳು, ಕೇಂದ್ರ, ರಾಜ್ಯ ಸರ್ಕಾರ ಹಾಗೂ ನೆರೆಹೊರೆ ರಾಜ್ಯ ಸರ್ಕಾರಗಳ ನೆರವಿನಿಂದ ವಿಮಾನ ನಿಲ್ದಾಣ ಮಾಡಲು ಶ್ರೀಗಳು ಆಸಕ್ತಿ ವಹಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಂದು ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳಲಿದ್ದು, ಅದಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಹೆಸರಿಡಲು ನಿರ್ಧರಿಸಲಾಗಿದೆ.
ಕೋವಿಡ್ ರೂಲ್ಸ್ ಪ್ರಕಾರವೇ ರಾಯರ ಆರಾಧನ ಮಹೋತ್ಸವ ನಡೆದಿದೆ. ಕೊರೊನಾ 3ನೇ ಅಲೆ ಭೀತಿ ಹೆಚ್ಚಿದ್ದು, ಬರುವ ಭಕ್ತಾದಿಗಳು ಕಡ್ಡಾಯವಾಗಿ ಕೋವಿಡ್ ರೂಲ್ಸ್ ಪಾಲಿಸಲೇಬೇಕು ಅಂತಾ ತಿಳಿಸಲಾಗಿದೆ. ಸದ್ಯ ಗುರು ಸಾರ್ವಭೌಮರ 350ನೇ ಆರಾಧನೆ, ಮಂತ್ರಾಲಯ ಮಠದಲ್ಲಿ ಕಳೆಗಟ್ಟಿದ್ದು, ಭಕ್ತರು ರಾಯರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.