ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರೆಗೆ ದಿನಗಣನೆ ಆರಂಭವಾಗಿದ್ದು, ನಾಡಹಬ್ಬದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಇದೀಗ ಮೈಸೂರಿನತ್ತ ಪ್ರಯಾಣ ಬೆಳೆಸಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಮೊದಲ ಹಂತದಲ್ಲಿ 5 ಆನೆಗಳು ವೀರನಹೊಸಹಳ್ಳಿಯತ್ತ ಪಯಣ ಬೆಳೆಸಿವೆ. ಗಣಪತಿ ಪೂಜೆ ನೆರವೇರಿಸುವ ಮೂಲಕ ಸಾಂಪ್ರದಾಯಿಕವಾಗಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ಮೈಸೂರು ದಸರೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಮೊದಲ ಹಂತದಲ್ಲಿ ಐದು ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ. ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ ಹಾಗೂ ಕಾವೇರಿ ಆನೆಗಳು ಗಜಪಯಣದಲ್ಲಿ ಭಾಗಿಯಾಗಲಿವೆ. 4 ಗಂಡಾನೆಗಳು ಹಾಗೂ ಒಂದು ಹೆಣ್ಣಾನೆ ಒಳಗೊಂಡ ಈ ಗಜಪಡೆಗೆ ದುಬಾರೆ ಸಾಕಾನೆ ಶಿಬಿರದಲ್ಲೇ ಸಾಂಪ್ರದಾಯಿಕವಾಗಿ ಗಣಪತಿ ಪೂಜೆ ನೆರವೇರಿಸಲಾಯಿತು.
ಸೋಮವಾರಪೇಟೆ ವಲಯದ ಎಸಿಎಫ್ ನವೀನ್ ಅವರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಆನೆಗಳ ಮಾವುತರು ಹಾಗೂ ಕಾವಾಡಿಗಳು ಭಾಗವಹಿಸಿದರು. ಯಾವುದೇ ವಿಘ್ನಗಳು ಎದುರಾಗದಂತೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ಪೂಜೆ ಬಳಿಕ ಆನೆಗಳನ್ನು ಲಾರಿಗಳ ಮೂಲಕ ಮೈಸೂರು ಜಿಲ್ಲೆಯ ವೀರನಹೊಸಹಳ್ಳಿಗೆ ಕಳುಹಿಸಲಾಯಿತು. ಅಲ್ಲಿಂದ ದಸರಾ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ನಾಡದೇವತೆಯ ದಸರಾ ಹಬ್ಬದಲ್ಲಿ ಆನೆಗಳೊಂದಿಗೆ ಭಾಗಿಯಾಗುವುದು ಹೆಮ್ಮೆಯ ಹಾಗೂ ಸಂತಸದ ವಿಚಾರ ಎಂದು ಮಾವುತರು ಮತ್ತು ಕಾವಾಡಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಕಾನೆಗಳ ಮೂಲಕ ನಾಡದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಸುಮಾರು 1 ತಿಂಗಳ ಕಾಲ ದಸರಾ ಆನೆಗಳಿಗೆ ವಿಶೇಷ ಆಹಾರ ನೀಡುವುದರ ಜೊತೆಗೆ ಆರೋಗ್ಯ ತಪಾಸಣೆ ಹಾಗೂ ವಿವಿಧ ಹಂತದ ತರಬೇತಿ ನೀಡಲಾಗುತ್ತದೆ. ಜಂಬೂಸವಾರಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಆನೆಗಳನ್ನ ಸಜ್ಜುಗೊಳಿಸಲಾಗುತ್ತದೆ. ಈಗಾಗಲೇ ಪಶುವೈದ್ಯಾಧಿಕಾರಿಗಳು ಸಾಕಾನೆಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ದುಬಾರೆ ಸಾಕಾನೆ ಶಿಬಿರದಿಂದ ಮೊದಲ ಹಂತದಲ್ಲಿ 5 ಆನೆಗಳು ಮೈಸೂರಿನತ್ತ ಪಯಣ ಬೆಳೆಸಿವೆ. ಮುಂದಿನ ಹಂತದಲ್ಲಿ ದುಬಾರೆ ಶಿಬಿರದಿಂದ ಇನ್ನಷ್ಟು ಆನೆಗಳನ್ನ ಮೈಸೂರಿಗೆ ಕಳುಹಿಸುವ ಸಿದ್ಧತೆ ನಡೆದಿದೆ.
ನಾಡಹಬ್ಬ ಮೈಸೂರು ದಸರೆಯ ಜಂಬೂಸವಾರಿಯಲ್ಲಿ ಗಜಪಡೆ ಪ್ರಮುಖ ಆಕರ್ಷಣೆಯಾಗಿದ್ದು, ಕೊಡಗಿನ ದುಬಾರೆ ಸಾಕಾನೆ ಶಿಬಿರದ ಆನೆಗಳಿಗೂ ಪ್ರತಿವರ್ಷ ವಿಶೇಷ ಜವಾಬ್ದಾರಿ ನೀಡಲಾಗುತ್ತದೆ. ದುಬಾರೆಯಲ್ಲಿ ಗಣಪತಿ ಪೂಜೆ ಸಲ್ಲಿಸಿ ಲಾರಿ ಏರಿದ ಗಜಪಡೆ ಇದೀಗ ವೀರನಹೊಸಹಳ್ಳಿಯತ್ತ ಸಾಗಿದೆ. ಅಲ್ಲಿಂದ ಅರಮನೆ ನಗರಿ ಮೈಸೂರಿನತ್ತ ಪ್ರಯಾಣ ಬೆಳೆಸಿ, ನಾಡಹಬ್ಬದ ವೈಭವದ ಜಂಬೂಸವಾರಿಗೆ ಸಜ್ಜಾಗಲಿದೆ.
Laxmi News 24×7