Breaking News
Home / ಜಿಲ್ಲೆ / ಹೊರ ಜಿಲ್ಲೆಯ ಉದ್ಯೋಗದಿಂದ ಹಿಂತಿರುಗಿದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಸೂಚನೆ

ಹೊರ ಜಿಲ್ಲೆಯ ಉದ್ಯೋಗದಿಂದ ಹಿಂತಿರುಗಿದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಸೂಚನೆ

Spread the love

ಹಾವೇರಿ: ಎ.25 (ಕರ್ನಾಟಕ ವಾರ್ತೆ): ಉದ್ಯೋಗ ನಿಮಿತ್ಯ ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರು ಇದೀಗ ಮರಳಿ ತಮ್ಮ ಸ್ವಂತ ಗ್ರಾಮಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಗೆ ಬರುವ ಜನರನ್ನು ಕಡ್ಡಾಯವಾಗಿ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯದ ಮಾದರಿ ಬರುವತನಕ ಸರ್ಕಾರಿ ಕ್ವಾರಂಟೈನ್‍ನಲ್ಲಿ ಇರಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಎಲ್ಲ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.
ಶನಿವಾರ ಜಿಲ್ಲೆಯ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಸರ್ಕಾರದ ಸೂಚನೆಯಂತೆ ರಾಜ್ಯದ ವಲಸೆ ಕಾರ್ಮಿಕರನ್ನು ಆಯಾ ಜಿಲ್ಲಾಡಳಿತ ತಮ್ಮ ತಮ್ಮ ಸ್ವಂತ ಊರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಉಳಿದಿರುವ ಬೇರೆ ಜಿಲ್ಲೆಗಳ ಕಾರ್ಮಿಕರನ್ನು ರಸ್ತೆ ಸಾರಿಗೆ ಬಸ್ ಮೂಲಕ ಸ್ವಂತ ಗ್ರಾಮಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ ಯಾವುದೇ ಕರೋನಾ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಗ್ರೀನ್ ವಲಯ ಎಂದು ಗುರುತಿಸಲಾಗಿದೆ. ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮವಾಗಿ ಹೊರ ಜಿಲ್ಲೆಯಿಂದ ಹಾವೇರಿ ಜಿಲ್ಲೆಗೆ ಆಗಮಿಸುವ ಕಾರ್ಮಿಕರನ್ನು ಚೆಕ್‍ಪೋಸ್ಟ್‍ಗಳಿಂದ ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಕಡ್ಡಾಯವಾಗಿ ಕೋವಿಡ್ ಸೋಂಕು ಕುರಿತಂತೆ ಎಲ್ಲರ ರಕ್ತದ ಮಾದರಿ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ತೆಗೆದು ಪರೀಕ್ಷೆಗೆ ಲ್ಯಾಬ್‍ಗೆ ಕಳುಹಿಸಬೇಕು. ಲ್ಯಾಬ್ ವರದಿ ಬರುವ ತನಕ ಕಡ್ಡಾಯವಾಗಿ ಆಯಾ ತಾಲೂಕಿನ ಸಾಂಸ್ಥಿಕ ಕ್ವಾರೆಂಟೈನ್‍ನಲ್ಲಿ ಇಡಬೇಕು. ಲ್ಯಾಬ್ ವರದಿ ನೆಗಟಿವ್ ಬಂದರೆ ಅವರವರ ಮನೆಗಳಿಗೆ ಕಳುಹಿಸಿಕೊಡುವಂತೆ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.
ಬಸ್ ವ್ಯವಸ್ಥೆ: ಉದ್ಯೋಗ ಅರಸಿ ಜಿಲ್ಲೆಗೆ ಬಂದಿರುವ ಕಾರ್ಮಿಕರು ತಮ್ಮ ಊರಿಗೆ ತೆರಳು ಇಚ್ಛಿಸಿದಲ್ಲಿ ಸರ್ಕಾರದ ನಿಯಮಾನುಸಾರ ಒಂದು ಬಸ್ಸಿನಲ್ಲಿ 21 ಜನರಿಗೆ ಪ್ರಯಾಣಿಸಲು ಅವಕಾಶ. ಬಸ್ ಪ್ರಯಾಣಕ್ಕೆ ಮುನ್ನ ಬಸ್‍ನ್ನು ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಛಗೊಳಿಸಬೇಕು. ಬಸ್ಸಿನಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್, ಪ್ರಯಾಣಿಕರಿಗೆ ಮಾಸ್ಕ್, ಆಹಾರ ಪೊಟ್ಟಣ ನೀಡಬೇಕು. ಚಾಲಕರ ಜೊತೆಗೆ ಕಡ್ಡಾಯವಾಗಿ ಎರಡು ಜನ ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳುಹಿಸಿ ಆಯಾ ಜಿಲ್ಲೆಗೆ ಪ್ರಯಾಣಿಕರನ್ನು ತಲುಪಿಸುವ ಕೆಲಸ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸೂಚನೆ ನೀಡಿದರು.
ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಮೀಕ್ಷೆ ಅನುಸಾರ ಜಿಲ್ಲೆಯಲ್ಲಿ 1266 ವಲಸೆ ಕಾರ್ಮಿಕರ ಪಟ್ಟಿ ತಯಾರಾಗಿದೆ. ಯಾರು ತಮ್ಮ ಸ್ವ ಗ್ರಾಮಕ್ಕೆ ತೆರಳುತ್ತಾರೆ ಎಂಬುದನ್ನು ಪಟ್ಟಿಮಾಡಿ ಸರ್ಕಾರದ ಮಾರ್ಗಸೂಚಿಯಂತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಮೂಲಕ ಆಯಾ ಜಿಲ್ಲೆಗೆ ಕಳುಹಿಸುವ ವ್ಯವಸ್ಥೆಮಾಡಿ ಎಂದು ಸೂಚನೆ ನೀಡಿದರು.
ನಗರ ಪ್ರದೇಶದ ಹೊರ ವಲಯದಲ್ಲಿ ಕಬ್ಬಿಣ, ಸಿಮೆಂಟ್ ಅಂಗಡಿಗಳನ್ನು, ಮೊಬೈಲ್ ಶಾಪ್‍ಗಳನ್ನು ತೆರೆಯಲು ಅನುಮತಿ ನೀಡಿದೆ. ಯಾವುದೇ ಜನದಟ್ಟಣೆ ಇಲ್ಲದ ಹೊರ ವಲಯದ ಅಂಗಡಿಗಳನ್ನು ಸ್ಥಳೀಯವಾಗಿ ಕ್ರಮಕೈಗೊಳ್ಳಿ. ತರಕಾರಿ, ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಮಾರ್ಗಸೂಚಿಯಂತೆ ಉಳಿದ ಅಂಗಡಿಗಳಿಗೆ ಸಮಯ ನಿಗಧಿಪಡಿಸುವ ಕುರಿತಂತೆ ತಮ್ಮ ಹಂತದಲ್ಲಿ ಕ್ರಮಕೈಗೊಳ್ಳಿ. ಎಲ್ಲ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡಿರಬೇಕು. ಶೇ.30 ರಷ್ಟು ಕಾರ್ಮಿಕರು ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಹೋಟೆಲ್‍ಗಳಲ್ಲಿ ಹಾಗೂ ಜ್ಯೂಸ್ ಅಂಗಡಿಗಳಲ್ಲಿ ಪಾರ್ಸ್‍ಲ್‍ಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಬಟ್ಟೆ ಅಂಗಡಿ, ಕಂಟಿಂಗ್ ಶಾಪ್‍ಗಳಿಗೆ ಅವಕಾಶಗಳಿರುವುದಿಲ್ಲ. ಮಾರಾಟದ ಬೆಲೆ ಹಾಗೂ ಬಿಲ್‍ಗಳನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲ ಅಂಗಡಿಗಳು ತಾಕೀತು ಮಾಡಬೇಕು ಎಂದು ತಿಳಿಸಿದರು.
ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಮಾಸ್ಕ್ ಹಾಗೂ ಸುರಕ್ಷತಾ ಕ್ರಮಗಳ ಅನುಷ್ಠಾನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರಂತರವಾಗಿ ನಿಗಾವಹಿಸುವಂತೆ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.
ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಹಾಗೂ ವೈದ್ಯಕೀಯ ವೃತ್ತಿನಿರತರಲ್ಲಿ ಜ್ವರ, ಗಂಟಲು ನೋವು, ಕೆಮ್ಮು,ಸೀನು ಸೋಂಕು ಕುರಿತಂತೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡವರ ಮಾಹಿತಿ ಪಡೆದು ಪ್ರತಿದಿನ ದಿನ ಕಳುಹಿಸಬೇಕು. ತುರ್ತು ಆರೋಗ್ಯ ತಪಾಸಣೆ ವರದಿ ಹಾಗೂ ಮನೆ ಮನೆ ಆರೋಗ್ಯ ತಪಾಸಣೆಯ ಮಾಹಿತಿಯನ್ನು ತ್ವರಿತವಾಗಿ ಕಳುಹಿಸಿಕೊಡುವಂತೆ ಸೂಚನೆ ನೀಡಿದರು.
ಮಠಗಳು, ವಿವಿಧ ದಾನಿಗಳು, ಸ್ವಯಂ ಸೇವಾ ಸಂಘಗಳಿಂದ ಕೊಡಮಾಡುವ ಆಹಾರ ಪೊಟ್ಟಣಗಳನ್ನು ಕಡ್ಡಾಯವಾಗಿ ತಹಶೀಲ್ದಾರಗಳ ಮೂಲಕವೇ ವಿತರಣೆಮಾಡಬೇಕು. ಯಾರಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ದಾಖಲಿಸಬೇಕು. ರೇಷನ್ ಕಾರ್ಡ್ ಇಲ್ಲದವರು ಹಾಗೂ ರೇಷನ್ ಕಾರ್ಡಿಗಾಗಿ ಅರ್ಜಿ ಹಾಕಿದವರಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಬೇಕು. ಯಾರಿಗೆ ಆಹಾರ ಸಾಮಗ್ರಿಯ ಅಗತ್ಯವಿದೆಯೋ ಅಂತವರಿಗೆ ಆಹಾರ ನೀಡುವ ಕುರಿತಂತೆ ಆದ್ಯತೆ ನೀಡಬೇಕು. ನಾಳೆಯೊಳಗೆ ಎಲ್ಲರಿಗೂ ಆಹಾರ ಪೊಟ್ಟಣಗಳು ವಿತರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಕ ಜಗದೀಶ ಲಮಾಣಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿರೇಂದ್ರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಇತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ: ಅಂಜಲಿ ಹೇಳಿಕೆಗೆ ಸ್ಪಷ್ಟನೆ ನೀಡಲು BJP ಆಗ್ರಹ

Spread the love ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಮಹಾರಾಷ್ಟ್ರಕ್ಕೆ ಸೇರಬೇಕಾಗಿವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ