ಹಾಸನ; ಕೊರೋನಾ ಹಾಗೂ ಲಾಕ್ ಡೌನ ಸಂಕಟದೊಂದಿಗೆ ಸಾಮಾನ್ಯ ಜನರ ರಕ್ತ ಹೀರುವ ರೀತಿ ವ್ಯಾಪಾರಸ್ಥರು ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಬೇಕಾಬಿಟ್ಟಿ ದರದಲ್ಲಿ ಮಾರಾಟಕ್ಕೆ ಇಳಿದಿದ್ದಾರೆ.
ಕೊರೋನಾ ಸೋಂಕಿನ ಕಾರಣ ಹೈರಾಣಾಗಿರೊ ಸಾಮಾನ್ಯ ವರ್ಗದ ಜನರಿಗೆ ಲಾಕ್ ಡೌನ್ ನಂತರ… ಇತ್ತ ಕೆಲಸಕ್ಕು ಹೋಗಲಾಗದೆ ದುಡಿದು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನೆ ನಂಬಿ ಬದುಕುತ್ತಿದ್ದಾರೆ .ಈ ನಡುವೆ ದಿನಸಿ ಪದಾರ್ಥಗಳನ್ನು ಕೊಳ್ಳಲು ಹೋದರೆ ನಿಗದಿತ ಬಲೆಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ತ್ರಾಸದಾಯಕವಾಗಿದೆ.
# ಸಗಟು ಮಾರಾಟಗಾರರೇ ಮೂಲ;
ಇನ್ನೂ ಲಾಕ್ ಡೌನ್ ನೆಪವಾಗಿಸಿ…ಲೂಟಿಗೆ ಇಳಿದಿರುವ ಹೊಲ್ಸೇಲ್ ಮಾರಾಟಗಾರರು ಚಿಲ್ಲರೆ ಅಂಗಡಿಗಳಿಗೆ ಹೆಚ್ಚಿನ ದರ ವಿಧಿಸಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ ಇದನ್ನು ಕೊಂಡು ತಂದು ಮಾರಾಟಕ್ಕಿಳಿಯುವ ಚಿಲ್ಲರೆ ಅಂಗಡಿಯವರು ಗ್ರಾಹಕರಿಂದ ಇನ್ನಷ್ಟು ಹೆಚ್ಚಿನ ದರ ವಿಧಿಸಿ ಮಾರಾಟ ಮಾಡುತ್ತಿದ್ದಾರೆ. ಇನ್ನೂ ವಿಧಿ ಇಲ್ಲದೆ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಬಡ ಗ್ರಾಹಕರದ್ದಾಗಿದೆ.
# ಆದೇಶಕ್ಕೆ ಬೆಲೆ ಇಲ್ಲಾ.;
ಲಾಕ್ ಡೌನ್ ಸಂದರ್ಭದಲ್ಲಿ ಅಂಗಡಿ ಮಾಲೀಕರು ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು ಇದಕ್ಕೆ ಯಾವೊಬ್ಬ ಅಂಗಡಿಯವರು ಕ್ಯಾರೆ ಎನ್ನುತ್ತಿಲ್ಲ.. ಅವರೇನೂ ಆಫಿಸಿನಲ್ಲಿ ಕೂತು ಆದೇಶ ಮಾಡುತ್ತಾರೆ … ಸಗಟು ಮಾರಾಟಗಾರರು ದಾಸ್ತಾನು ಸರಬರಾಜು ವ್ಯತ್ಯಯದ ಕಾರಣ ನೀಡಿ ನಮಗೆ ಹೆಚ್ಚಿನ ದರ ವಿಧಿಸುತ್ತಾರೆ ನಾವೇನು ಮಾಡಲಾಗದು …!! ನಿಗಧಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹಲವು ವ್ಯಾಪಾರಿಗಳು.
# ಆದೇಶ ಕಠಿಣವಾಗಬೇಕಿದೆ….!!
ಜಿಲ್ಲಾಧಿಕಾರಿ ಅವರೇನೋ ಆದೇಶ ಮಾಡಿದ್ದಾರೆ ಆದರೆ ಸ್ಥಳೀಯ ಪುರಸಭಾ ಹಾಗೂ ನಗರಸಭೆ ಆಡಳಿತಾಧಿಕಾರಿಗಳು ಸಗಟು ಮಾರಾಟಗಾರರನ್ನು ಸಭೆ ಕರೆದು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕಠಿಣ ಸಂದೇಶ ನೀಡಬೇಕಿದೆ.
ಒಟ್ಟಾರೆ ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ಅಂಗಡಿ ವ್ಯಾಪಾರಸ್ಥರ ದರಸಮರದ ನಡುವೆ ಬಡ ಗ್ರಾಹಕರು ಹೈರಾಣಾಗಿದ್ದಾರೆ.
ಈ ಕೊರೋನಾ ಸೋಂಕಿಗಿಂತಲೂ ಬಡಜನರ ಹಸಿವು ಹಾಗೂ ಜೀವನ ನಿರ್ವಹಣೆ ನರಕಯಾತನೆ ಯಾಗಿರುವುದಂತು ನಿತ್ಯ ಸತ್ಯವಾಗಿದೆ..