ಘಟಪ್ರಭಾ : ಕಳೆದ ಹತ್ತು ಹದಿನೈದು ವರ್ಷಗಳಿಂದ ಸಾರ್ವಜನಿಕರಿಂದ ಆಕ್ರಮಿಸಿಕೊಂಡಿದ್ದ ಸರ್ಕಾರಿ ಭೂಮಿಯನ್ನು ಮರು ವಶಪಡಿಸಿಕೊಂಡ ಘಟನೆ ಪಾಮಲದಿನ್ನಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಪಾಮಲದಿನ್ನಿ ಗ್ರಾಮದಲ್ಲಿ ಸರ್ವೆ ನಂ. 4 ರಲ್ಲಿ ಸುಮಾರು 10 ಎಕರೆ ಭೂಮಿ ಇದ್ದು, ಅದರಲ್ಲಿಯ 2 ಎಕರೆಯಷ್ಟು ಭೂಮಿಯನ್ನು ಸರಕಾರಿ ಪ್ರೌಢಶಾಲೆಗೆ ಬಿಟ್ಟು ಕೊಡಲಾಗಿದೆ. ಇನ್ನುಳಿದ ಜಾಗದಲ್ಲಿ ಸಾರ್ವಜನಿಕರ ಅಭಿವೃದ್ಧಿಯ ಹಿತ ದೃಷ್ಟಿಯಿಂದ ವಿವಿಧ ಇಲಾಖೆಗಳ ಉಪಯೋಗಕೆಂದು ಕಾಯ್ದಿರಿಸಲಾಗಿತ್ತು. ಈಗ ಈ ಕಾಯ್ದಿರಿಸಿದ ಸರ್ಕಾರದ ಭೂಮಿಯನ್ನು ಕೆಲ ಸಾರ್ವಜನಿಕರು ಹೊಲ ಮನೆ ಮಾಡಿಕೊಂಡು ತಮ್ಮ ಉಪಯೋಗಕ್ಕಾಗಿ ಬಳಸುತ್ತಿದ್ದರು.
ಇಂದು ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್ ಎಸ್.ಎನ್. ಹಿರೇಮಠ ಅವರ ನೇತ್ರತ್ವದಲ್ಲಿ 3 ಜೆ.ಸಿ.ಬಿ. ಗಳ ಸಹಾಯದಿಂದ ಅತಿಕ್ರಮಣ ಮಾಡಿ ಹೊಲ – ಮನೆಗಳನ್ನು ನಿರ್ಮಿಸಿಕೊಂಡಿದ ಜಾಗವನ್ನು ತೆರವುಗೊಳಿಸಲಾಯಿತು. ಕಂದಾಯ ಇಲಾಖೆಯು ಮುಂಚಿತವಾಗಿಯೇ ಮನೆಗಳನ್ನು ತೆರವು ಮಾಡುವುದರ ಕುರಿತು ಮುನ್ನೆಚ್ಚರಿಕೆ ನೀಡಿತ್ತು, ಇದರಿಂದ ಎಚ್ಚೆತ್ತ ಜನರು ಸ್ವಪ್ರೇರಣೆಯಿಂದ ಯಾವುದೇ ಗಲಾಟೆ, ಗದ್ದಲ, ಪ್ರತಿಭಟನೆ ಮಾಡದೆ ಜಾಗವನ್ನು ಖಾಲಿ ಮಾಡಲು ಸಹಕರಿಸಿದರು. ಇಲ್ಲಿ ಇನ್ನು ಒಂದು ವಿಶೇಷ ಅಂದರೆ ಸುಮಾರು ಆರು ತಿಂಗಳ ಹಿಂದೆಯೇ ಅತಿಕ್ರಮಣ ಕಾರ್ಯಾಚರಣೆ ನಡೆದಿತ್ತು, ಆದರೆ ಅಲ್ಲಿ ಪುನಃ ಹೊಲ – ಮನೆ ನಿರ್ಮಾಣ ಮಾಡಿಕೊಂಡ ಹಿನ್ನಲೆಯಲ್ಲಿ ಸೋಮವಾರ ಮತ್ತೆ ಕಾರ್ಯಾಚರಣೆ ಮಾಡಬೇಕಾಯಿತು. ಹೀಗಾಗಿ ಪುನಃ ಪುನಃ ಕಾರ್ಯಾಚರಣೆ ನಡೆಸುವ ಬದಲು ಶಾಶ್ವತ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಘಟಪ್ರಭಾ ಠಾಣೆಯ ಪಿ.ಐ. ಶ್ರೀಶೈಲ ಬ್ಯಾಕೋಡ ಸೂಕ್ತ ಬಂದೋ ಬಸ್ತ ವ್ಯವಸ್ಥೆ ಕಲ್ಪಿಸಿದ್ದರು.
ಕಾರ್ಯಾಚರಣೆ ವೇಳೆ ಗ್ರಾ. ಪಂ. ಅಧ್ಯಕ್ಷರಾದ ಮಲ್ಲಪ್ಪ ಕೌಜಲಗಿ, ಸದಸ್ಯರಾದ ಲಕ್ಕಪ್ಪ ರಾಜಾಪೂರೆ, ರಾಜಪ್ಪ ಹೂಲಿಕಟ್ಟಿ, ರಾಮಪ್ಪ ಡಬಾಜ, ಭೀಮಶಿ ನಿಲಗಜಿ, ಗ್ರಾ.ಪಂ. ಪಿ.ಡಿ.ಓ. ಎಸ್.ಎಲ್.ಬಬಲಿ, ಗ್ರಾಮ ಲೆಕ್ಕಾಧಿಕಾರಿ ಎ.ಆರ್.ಲಂಗೋಟಿ ಮತ್ತು ಗ್ರಾಮದ ಹಿರಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.