ಬೆಳಗಾವಿ : ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆ ನಾಗರಿಕರು ಮತ್ತು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ. ಇತಿಹಾಸ, ಸಂಸ್ಕೃತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅಮೂಲ್ಯ ಮಾಹಿತಿಯ ಭಂಡಾರವಾಗಿದೆ. ಈ ಎರಡೂ ಅಮೂಲ್ಯ ಸಂಗ್ರಹಣೆಗಳು ನಮ್ಮ ಇತಿಹಾಸ ಬಹುಮುಖ್ಯ ಸಂಪತ್ತು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಮಹಾಂತೇಶ ನಗರ ರಹವಾಸಿಗಳ ಸಂಘ, ಅಂಚೆ ಇಲಾಖೆ ಹಾಗೂ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದಿಂದ ಮಹಾಂತೇಶ ನಗರ ಮಹಾಂತ ಭವನದಲ್ಲಿ ಜರುಗಿದ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ ಪ್ರದರ್ಶನದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ಮಾತನಾಡಿ, ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆ ಪ್ರದರ್ಶನವು ಇತಿಹಾಸವನ್ನು ಕಲಾತ್ಮಕವಾಗಿ ಪರಿಚಯಿಸುವ ಅಪರೂಪದ ಪ್ರಯತ್ನವಾಗಿದೆ ಎಂದರು.
ಉಪ ಮಹಾಪೌರ ಹನುಮಂತ ಕೊಂಗಾಲಿ ಮಾತನಾಡಿ, ಇಂತಹ ಜ್ಞಾನವರ್ಧಕ ಕಾರ್ಯಕ್ರಮಗಳ ಯಶಸ್ಸಿಗೆ ಶಿಕ್ಷಕರ ಸಹಕಾರ ಅಗತ್ಯ ಎಂದು ಹೇಳಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಗುರವ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸಂಜೀವ ಪಟ್ಟಣಶೆಟ್ಟಿ, ಸಂಗಮೇಶ ಅರಳಿ, ಪ್ರಶಾಂತ ಜಿದ್ಧಿ, ಕಿರಣ ತುಬಾಕಿ, ದೀಪಕ ಗುಡಗನಟ್ಟಿ, ಪ್ರಸಾದ ಹಿರೇಮಠ, ಡಾ.ನಿರ್ಮಲಾ ಬಟ್ಟಲ, ಆರ್.ಎಂ.ಈರೇಗಾರ, ಅನಿಲ ಪಾಟೀಲ, ಯೋಗಿತಾ ಪಾಟೀಲ ಇತರರಿದ್ದರು.
ರುತಿಕಾ ಜಾಲಿಹಾಳ ಪ್ರಾರ್ಥಿಸಿದರು. ಡಾ.ಎಸ್.ವಿ.ವಾಲಿಶೆಟ್ಟಿ ಸ್ವಾಗತಿಸಿದರು. ಪ್ರೊ.ರೂಪಾ ಅಕ್ಕಿ ನಿರೂಪಿಸಿದರು. ಪ್ರೊ.ಸೋನಲ್ ಚಿನಿವಾಲ ವಂದಿಸಿದರು.
Laxmi News 24×7