ಬೆಳಗಾವಿ: ವೈದ್ಯಕೀಯ ವೃತ್ತಿ ಮೂಲ ಆತ್ಮ ಪ್ರಾಮಾಣಿಕತೆ ಮತ್ತು ಅನುಕಂಪ. ಎಷ್ಟೇ ಹಿರಿಯ ಅನುಭವಿ ಮತ್ತು ಪಾಂಡಿತ್ಯವಿರುವ ವೈದ್ಯನೇ ಇರಲಿ, ರೋಗಿಗೆ ಮೋಸ ಮಾಡದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವರು ಮಾತ್ರ ಅತ್ಯುತ್ತಮ ವೈದ್ಯರಾಗಿರುತ್ತಾರೆ ಎಂದು ಯುಎಸ್ಎಂ-ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಹೇಳಿದರು.
ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಬುಧವಾರ ಯಳ್ಳೂರ ರಸ್ತೆಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದುದು. ಇದರ ಪಾವಿತ್ರ್ಯ ಕಾಪಾಡುವ ಮತ್ತು ಗೌರವಿಸುವ ಜವಾಬ್ದಾರಿ ವೈದ್ಯರ ಮೇಲಿದೆ. ಹೀಗಾಗಿ, ವೈದ್ಯರು ತಾವು ಎಷ್ಟು ಪವಿತ್ರ, ಪ್ರಾಮಾಣಿಕ, ಅನುಕಂಪವುಳ್ಳವರು ಮತ್ತು ಎಷ್ಟು ಬಡವರಿಗೆ ಸಹಾಯ ಮಾಡಿದ್ದೇವೆ ಎಂಬುದನ್ನು ಆಗಾಗ ತಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಮತ್ತು ಶಿಕ್ಷಣ ಸಮಾಜದ ಮೃದು ಶಕ್ತಿಗಳು. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ಹೆಚ್ಚಾಗಿ ರೋಗ ತಡೆಗಟ್ಟುವಿಕೆ ಕುರಿತು ಮುಂಜಾಗ್ರತೆ ವಹಿಸುವತ್ತ ವೈದ್ಯರು ಗಮನಹರಿಸಬೇಕಿದೆ. ರೋಗಿಗಳನ್ನು ಗುಣಪಡಿಸುವ ವೈದ್ಯರು ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ವೈದ್ಯರು ಸ್ವಂತ ಆರೋಗ್ಯವಾಗಿದ್ದಲ್ಲಿ ಇತರರ ಆರೋಗ್ಯ ನೋಡಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ ಭೋವಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳು ಆಗುತ್ತಿವೆ. ಹೊಸ ಚಿಕಿತ್ಸಾ ವಿಧಾನಗಳು ಬರುತ್ತಿವೆ. ಏನೇ ಬದಲಾವಣೆಯಾದರೂ ವೈದ್ಯರು ಸಹಾನುಭೂತಿ ಮತ್ತು ತಾಳ್ಮೆಯಿಂದ ವರ್ತಿಸುವುದು ಇಂದಿನ ಅಗತ್ಯವಾಗಿದೆ. ಆರೋಗ್ಯ ಸಂಬಂಧಿತ ಎಲ್ಲ ಮಾಹಿತಿ ಈಗ ತಂತ್ರಜ್ಞಾನದಲ್ಲಿ ಅಳವಡಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ರೋಗಿಯ ದತ್ತಾಂಶ ಸೋರಿಕೆಯಾಗದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಸವಾಲು ವೈದ್ಯರಿಗಿದೆ ಎಂದು ಹೇಳಿದರು.
ಆಸ್ಪತ್ರೆ ಸಿಇಒ ನವೀನ್ ಎನ್., ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ವೇದಿಕೆಯಲ್ಲಿದ್ದರು. ಡಾ.ಸಂಜೀವಿನಿ ರಾಥೋಡ್ ನಿರೂಪಿಸಿದರು. ಡಾ.ಅಶ್ವಿನಿ ಪದ್ಮಶಾಲಿ ವಂದಿಸಿದರು.
Laxmi News 24×7