ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದ ಯುವತಿಗೆ ಎಂಗೇಜ್ಮೆಂಟ್ ಆಗಿದೆ ಎಂಬ ವಿಚಾರ ತಿಳಿದು ಅಪ್ರಾಪ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬೇಗೂರು ಬಳಿಯ ಅಕ್ಷಯ ನಗರದಲ್ಲಿ ನಡೆದಿದೆ.
15 ವರ್ಷದ ಅಪ್ರಾಪ್ತನಿಗೆ ಇನ್ಸ್ಟಾಗ್ರಾಮ್ ಮೂಲಕ ಯುವತಿಯ ಪರಿಚಯವಾಗಿತ್ತು. ಕಳೆದ ಮೂರು ತಿಂಗಳಿನಿಂದ ಇಬ್ಬರೂ ಫೋನ್ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಆದರೆ, ನಿನ್ನೆ ಸಂಜೆ ಯುವತಿ ಕರೆ ಮಾಡಿ, ನನಗೆ ಎಂಗೇಜ್ಮೆಂಟ್ ಆಗಿದೆ. ಇನ್ಮುಂದೆ ಫೋನ್ ಮಾಡಬೇಡ ಎಂದು ಹೇಳಿದ್ದಾಳೆ. ಇದರಿಂದ ಬೇಸರಗೊಂಡು ಬಾಲಕ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮನೆಯ ಆರನೇ ಮಹಡಿಗೆ ತೆರಳಿ, ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ತಿಳಿದು ಸ್ಥಳಕ್ಕೆ ಬೇಗೂರು ಪೊಲೀಸರು ಧಾವಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಪೊಲೀಸರು ಅಪ್ರಾಪ್ತನ ಮನವೊಲಿಸಿ, ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಬಳಿಕ ಆತನಿಗೆ ಬುದ್ಧಿವಾದ ಹೇಳಿ ಕುಟುಂಬದವರೊಂದಿಗೆ ಕಳುಹಿಸಿದ್ದಾರೆ.
Laxmi News 24×7