ಬೆಂಗಳೂರು , ಏ 12 : ನಾಳೆಯಿಂದ ಪ್ರಾರಂಭವಾಗಿ ಏಪ್ರಿಲ್-30 ರವರೆಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಕೋವಿಡ್ ಸರ್ವೇಕ್ಷಣಾ ತಂಡಗಳಿಂದ ಮನೆ ಮನೆ ಸಮೀಕ್ಷಾ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳ ತರಬೇತಿ ಕುರಿತು ಅವರು ಮಾಹಿತಿ ನೀಡಿದರು. ಕೋವಿಡ್-19 ರ ಸೋಂಕನ್ನು ಸಮುದಾಯ ಮಟ್ಟದಲ್ಲಿ ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಲಾಕ್ಡೌನ್ ಪರಿಸ್ಥಿತಿಯನ್ನು ಜಿಲ್ಲೆಯಾದ್ಯಂತ ಅನುಸರಿಸಲಾಗುತ್ತಿದೆ
ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ನಿರಂತರವಾಗಿ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ನಿಗಾಯಿಡಬೇಕು ಎಂದ ಅವರು ಈ ಹಿನ್ನಲೆಯಲ್ಲಿ ಮನೆ ಮನೆ ಸಮೀಕ್ಷೆಯನ್ನು ಕೈಗೊಂಡು ಕೋವಿಡ್-19 ಸೋಂಕು ಲಕ್ಷಣಗಳು ಇದ್ದರೆ ಕೂಡಲೇ ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವ ಮೂಲಕ ಇತರರಿಗೆ ಹರಡುವುದನ್ನು ತಪ್ಪಿಸುವುದು ಹಾಗೂ ಈ ಸಂದರ್ಭದಲ್ಲಿ ದೈನಂದಿನ ವಯಕ್ತಿಕ ಶುಚಿತ್ವ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಗ್ರಾಮಮಟ್ಟದ ಸಮಿತಿ, ಪ್ರಾಥಮಿಕ ಆರೋಗ್ಯ ಮತ್ತು ತಾಲ್ಲೂಕು ಮಟ್ಟದ ತಂಡ ಹಾಗೂತಾಲ್ಲೂಕು ಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ ಎಂದರು.
ಗ್ರಾಮ ಮಟ್ಟದ ಸಮಿತಿಯು ಮೂರು ಸದ್ಯರುಗಳನ್ನು ಒಳಗೊಂಡಿದ್ದು, ಅವರು ಮನೆ ಮನೆ ಭೇಟಿ ನೀಡಿ ಪ್ರತಿ ಮನೆಯ ಕುಟುಂಬದ ಇಲ್ಲಾ ಸದಸ್ಯರ ಜ್ವರ ಸಮೀಕೆ ನಡೆಸುವುದು, ಪ್ರತಿ ದಿನ ಕನಿಪ್ಠ 60 ಮನೆ ಭೇಟಿ ನೀಡುವುದು, ಕೋವಿಡ್ 19ರ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಮತ್ತು ಜ್ವರ, ಕೆಮ್ಮು, ನೆಗಡಿ ಲಕ್ಷಣ ಇದ್ದರೆ ಅವರನ್ನು ಸ್ಥಳೀಯ ತಪಾಸಣಾ ಕೇಂದ್ರಕ್ಕೆ ಕಳುಹಿಸುವುದು, ಈ ತಂಡದ ಜವಾಬ್ದಾರಿಗಳು ಆಗಿರುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಹಂತದ ತಂಡದಲ್ಲಿ ನಾಲ್ಕು ಸದಸ್ಯರು ಇದ್ದು, ಅವರು ಜ್ವರ ಪ್ರಕರಣಗಳ ತಪಾಸಣೆ ನಂತರ ಪರೀಕ್ಷೆಯನ್ನು (ಥ್ರೋಟ್ ಸ್ವ್ಯಾಬ್ ) ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿ ಕೊಡುವುದು, ಪರೀಕ್ಷಾ ಫಲಿತಾಂಶ ಬರುವ ವರೆಗೂ ಪ್ರಕರಣವನ್ನು ಕ್ವಾರಂಟೈನ್ ಮಾಡುವುದು, ಮತ್ತು ಪ್ರಕರಣವು ಕೋವಿಡ್ 19 ಪಾಸಿಟಿವ್ ಎಂದು ಕಂಡು ಬಂದಲ್ಲಿ ಕೂಡಲೇ ಸೋಂಕಿತ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರದಿಂದ ಗುರುತಿಸಲಾಗಿರುವ ಆಸ್ಪತ್ರೆಗೆ ದಾಖಲಿಸುವುದು, ಈ ತಂಡದ ಜವಾಬ್ದಾರಿಗಳು ಆಗಿರುತ್ತದೆ.
ತಾಲ್ಲೂಕು ಮಟ್ಟದ ಕ್ಷಿಪ್ರ ಕಾರ್ಯಪಡೆಯು ಆರು ಸದಸ್ಯರನ್ನು ಒಳಗೊಂಡಿದ್ದು, ಇವರು ಕೋವಿಡ್ 19 ಪಾಸಿಟೀವ್ ಪ್ರಕರಣಗಳ ತಪಾಸಣೆ ಹಾಗೂ ಪ್ರಕರಣವನ್ನು ಕೋವಿಡ್ 19 ಆಸ್ಪತ್ರೆಗೆ ವರ್ಗಾಯಿಸುವುದು, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕದ ಪಟ್ಟಿಯನ್ನು ತಯಾರಿಸುವುದು, ಅದರಲ್ಲಿ 60 ವರ್ಷ ಮೇಲ್ಪಟ್ಟವರನ್ನು ಪ್ರತ್ಯೇಕಿಸುವುದು, ಸರ್ವೇಕ್ಷಣಾ ಕಾರ್ಯವನ್ನು ಬಲಪಡಿಸುವುದು ಹಾಗೂ ಸೋಂಕು ಇರುವ ಪ್ರದೇಶಗಳನ್ನು ಲಾಕ್ಡೌನ್ ಮತ್ತು ಸೀಲ್ ಡೌನ್ ಮಾಡಿಸುವುದು. ಈ ಎಲ್ಲ ಜವಾಬ್ದಾರಿಗಳನ್ನು ತಂಡವು ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು ತಮ್ಮ ಕರ್ತವ್ಯಗಳ ಕುರಿತು ನಿರ್ಲಕ್ಷ ತೋರಿದರೆ ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಶಿವರಾಮೇಗೌಡ, ವಿಶೇಷ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿಗಳಾದ ಡಾ.ಶ್ರೀನಿವಾಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.