“ಕೊರೋನಾ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ”
ಬೆಳಗಾವಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ,ಕೊರೋನಾ ವೈರಸ್ ಹರಡದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳನ್ನು ಪರಿಶೀಲಿಸುವ ಕುರಿತು ಇಲಾಖೆಯ ನಿರ್ದೇಶಕರು ಹಾಗೂ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವಿಡಿಯೋ ಸಂವಾದ ನಡೆಸಿ, ಕೊರೋನಾ ವೈರಸ್ ನಿಯಂತ್ರಣ ಕುರಿತು ಚರ್ಚಿಸಿ ಸಭೆ ಉದ್ದೇಶಿಸಿ ಮಾತನಾಡಿದರು.
ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಆಶಾಕಾರ್ಯಕರ್ತೆಯರೊಂದಿಗೆ ಜಂಟಿಯಾಗಿ ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ಹೋಗಿ ಕ್ವಾರಂಟೈನ್ ನಲ್ಲಿ ಇದ್ದವರ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ಆಶಾ ಕಾರ್ಯಕರ್ತೆಯರ ಕೊರತೆಯಿದ್ದಲ್ಲಿ ಅಂಗನವಾಡಿ ಕಾರ್ಯಕರ್ತರು ಸಂಪೂರ್ಣವಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ, ಅಂಗವಾಡಿ ಕಾರ್ಯಕರ್ತರು ಆಹಾರ ಸರಬರಾಜನ್ನು ಈಗಾಗಲೇ ಉತ್ತಮವಾಗಿ ಮಾಡುತ್ತಿದ್ದು, ಅಂಗವಾಡಿ ಮಕ್ಕಳಿಗೆ ,ಗರ್ಭಿಣಿ ಯರಿಗೆ ಆಹಾರ ಒದಗಿಸುವ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿಅವರಿಗೆ ವೈಯಕ್ತಿಕ ಆರೋಗ್ಯದ ಕಾಳಜಿ ವಹಿಸಿ, ಸಾಮಾಜಿಕ ಅಂತರ ಕಾಪಾಡಲು ಸೂಚಿಸಿದರು.
ಆಹಾರ ವಿತರಣೆಗೆ ಹಾಗೂ ಇತರ ವಸ್ತುಗಳ ಸರಬರಾಜಿನಲ್ಲಿ ಏನಾದರು ಕೊರತೆ ಕಂಡಲ್ಲಿ ತಕ್ಷಣವೇ ಗಮನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿ, ಈ ಮಹಾಮಾರಿ ಹೋರಾಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಅವರೊಂದಿಗೆ ನಾನು ಕೂಡ ಕೈ ಜೋಡಿಸಿದ್ದೇನೆಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಬಸವರಾಜ ವರವಟ್ಟಿ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.