ಬೆಂಗಳೂರು : ಕೊರೋನಾ ಲಾಕ್ಡೌನ್ ಮೊದಲ ಹಂತದ ಅಂತಿಮ ಚರಣದಲ್ಲಿರುವ ಸಂದರ್ಭದಲ್ಲಿ ಜನರ ತೊಂದರೆಗೆ ಕಿವಿಗೊಡಲು ಖುದ್ದು ಸಿಎಂ ಯಡಿಯೂರಪ್ಪ ರೋಡಿಗಿಳಿದರು.
ಭಾನುವಾರ ಅಧಿಕಾರಿಗಳ ಸಮೇತ ಯಡಿಯೂರಪ್ಪ ಬೆಂಗಳುರಿನ ಸಿಟಿ ರೌಂಡ್ಸ್ ಕೈಗೊಂಡು ಜನ ಮತ್ತು ವ್ಯಾಪಾರಸ್ಥರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಿಟಿ ರೌಂಡ್ಸ್ ವೇಳೆ ಮುಖ್ಯಮಂತ್ರಿಗೆ ವ್ಯಾಪಾರಿಗಳಿಂದ ದೂರುಗಳ ಸುರಿಮಳೆಯೇ ಆಯಿತು.
ವ್ಯಾಪಾರ ಕಮ್ಮಿ, ಪಾಸ್ ಕೊಡ್ತಿಲ್ಲ. ಪೊಲೀಸರು ಬಿಡ್ತಿಲ್ಲ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡರು. ಈ ಮಧ್ಯೆ ಕೆಲವು ಸಾರ್ವಜನಿಕರು ಸರಕಾರದ ಲಾಕ್ ಡೌನ್ ನಿರ್ಧಾರ ಕೊರೋನಾ ವಿರುದ್ಧ ಹೋರಾಟದಲ್ಲಿ ಅಗತ್ಯವಾಗಿತ್ತು ಎಂದರು.
ಗೊರಗುಂಟೆ ಪಾಳ್ಯ, ಸುಮನಹಳ್ಳಿ ಸಿಗ್ನಲ್, ಜಯದೇವ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್, ಯಶವಂತಪುರ ಪ್ರದೇಶಗಳಿಗೆ ಸಿಎಂ ದಿಢೀರ್ ಭೇಟಿ ನೀಡಿದರು.
ಖುದ್ದು ಪರಿಶೀಲನೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಣ್ಣು, ಹೂವು ವ್ಯಾಪಾರಿಗಳ ಜತೆ ಚರ್ಚಿಸಿ ಸೂಕ್ತ ಸಲಹೆ ನೀಡಿ ಧೈರ್ಯ ತುಂಬಿದರು. ಅವರ ವ್ಯಾಪಾರಕ್ಕೆ ಅಡ್ಡಿ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದರು.