ಚಿಕ್ಕಮಗಳೂರು: ಕೊರೊನಾ ಎಫೆಕ್ಟ್ನಿಂದ ಹೊಟ್ಟೆ ತುಂಬಾ ಊಟ ಸಿಗದೆ ಬಾಣಂತಿಯೊಬ್ಬರು ತನ್ನ ಹಸುಗೂಸಿಗೆ ಹೊಟ್ಟೆ ತುಂಬಾ ಹಾಲು ಕುಡಿಸಲು ಪರಿತಪ್ಪಿಸುತ್ತಿರುವಂತಹ ಸ್ಥಿತಿ ಚಿಕ್ಕಮಗಳೂರಿನಲ್ಲಿ ನಿರ್ಮಾಣವಾಗಿದೆ.
ಹಣ್ಣು-ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ಸಿಗದೆ ಬಾಣಂತಿಯೂ ಸೊರಗಿದ್ದು, ಹಸುಗೂಸಿಗೆ ತಾಯಿಯ ಎದೆಹಾಲು ಕೂಡ ಸರಿಯಾಗಿ ಸಿಗುತ್ತಿಲ್ಲ. ನಗರದ ಹಿರೇಮಗಳೂರಿನ ರೈಲ್ವೆ ಬ್ರಿಡ್ಜ್ ಕೆಳಗೆ ಬಯಲಲ್ಲಿ ಶೆಡ್ ಹಾಕಿಕೊಂಡು ಬದುಕುತ್ತಿರುವ ನಿರಾಶ್ರಿತ ಕುಟುಂಬಗಳು ಶೋಚನಿಯ ಸ್ಥಿತಿ ತಲುಪಿವೆ. ಅಂದೇ ದುಡಿದು ಅಂದೇ ತಿನ್ನುತ್ತಿದ್ದ ಈ ನಿರಾಶ್ರಿತ ಹಕ್ಕಿ-ಪಿಕ್ಕಿ ಕುಟುಂಬಗಳಿಗೆ ಕೊರೊನಾ ಕಾಲದಲ್ಲಿ ಹೊಟ್ಟೆ ತುಂಬಾ ಊಟವೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಮಗುವಿಗೆ ಜನ್ಮ ನೀಡಿರುವ ಬಾಣಂತಿಯ ಆರೋಗ್ಯದಲ್ಲೂ ಏರುಪೇರಾಗಿದ್ದು ಹೊಟ್ಟೆ ತುಂಬಾ ಊಟವಿಲ್ಲದೆ ಆಕೆ ಬಳಲುತ್ತಿದ್ದರೆ, ಹೊಟ್ಟೆ ತುಂಬಾ ತಾಯಿಯ ಎದೆ ಹಾಲು ಸಿಗದ ಹಸುಗೂಸು ಸೊರಗಿ ಹೋಗಿದೆ. ಆರಂಭದ ದಿನದಲ್ಲಿ ದಿನಕ್ಕೆ ಒಂದು ಹೊತ್ತು ಯಾರಾದರೂ ತಂದುಕೊಟ್ಟರೆ ಊಟ ಮಾಡುತ್ತಿದ್ದರು. ಆದರೆ ಈಗ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ವಾರದ ಹಿಂದೆ ಉಳ್ಳವರು ತಂದು ಕೊಟ್ಟ ಸಾಮಾಗ್ರಿಗಳ ಕಿಟ್ ಮುಗಿದು ಹೋಗಿದ್ದು ಈ ಕುಟುಂಬಗಳು ನಾಳೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
14 ಕುಟುಂಬಗಳು ವಾಸವಿರುವ ಈ ಬಯಲಲ್ಲಿ 20ಕ್ಕೂ ಹೆಚ್ಚು ಮಕ್ಕಳಿವೆ. ಯಾರಾದರು ಬಂದರೆ ಮಕ್ಕಳು ಏನಾದರು ಕೊಡುತ್ತಾರೆಂದು ಬಂದವರ ಕೈಯನ್ನೆ ನೋಡುತ್ತವೆ. ನಾವು ಕೆಲಸಕ್ಕೆ ಹೋಗಿದ್ದರೆ ಏನೂ ಬೇಡವಾಗಿತ್ತು. ಆದರೆ ಈಗ ತಿಂಗಳಿಂದ ಕೆಲಸಕ್ಕೆ ಹೋಗಿಲ್ಲ. ಆಸ್ಪತ್ರೆಗೆ ಹೋಗಲು ದುಡ್ಡಿಲ್ಲ. ಊಟಕ್ಕೂ ಕಷ್ಟದ ಸ್ಥಿತಿ ಎದುರಾಗಿದೆ. ಯಾರಾದರೂ ರೇಷನ್ ಕೊಟ್ಟರೆ ಬದುಕುತ್ತೇವೆ ಎಂದು ಅಲ್ಲಿನ ಜನರು ಕಷ್ಟವನ್ನು ತೋಡಿಕೊಂಡಿದ್ದಾರೆ.