ಬೆಂಗಳೂರು: ಸಿನಿಮಾ ಸ್ಟೈಲ್ನಲ್ಲಿ ಬಸ್ನಲ್ಲಿ ಯುವತಿಗೆ ಕಿಸ್ ಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಯುವತಿಗೆ ಕಿಸ್ ಕೊಟ್ಟಿದ್ದ ಯುವಕನನ್ನು ಬಂಧಿಸಲಾಗಿದೆ. ಬಳ್ಳಾರಿ ಮೂಲದ ಇಂಜಿನಿಯರ್ ಮಧುಸೂದನ್ ರೆಡ್ಡಿ(25)ಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಚಲಿಸುತ್ತಿರುವ ಬಸ್ಸಲ್ಲಿ ಮುತ್ತು ಕೊಡುತ್ತಾರೆ. ಅಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸಿನಿಮಾ ವೀಕ್ಷಿಸಿ ಪ್ರೇರಣೆಗೊಂಡ ಯುವಕನೋರ್ವ ಚಲಿಸುತ್ತಿದ್ದ ಬಸ್ಸಲ್ಲಿಯೇ ಯುವತಿಗೆ ಗೀತ ಗೋವಿಂದಂ ಸಿನಿಮಾದ ದೃಶ್ಯದ ರೀತಿಯಲ್ಲೇ ಮುತ್ತು ಕೊಟ್ಟಿದ್ದಾನೆ. ಆದರೆ ಎಲ್ಲವೂ ಸಿನಿಮಾದಂತೆಯೂ ಆಗಲು ಇದು ಸಿನಿಮಾ ಅಲ್ಲವಲ್ಲ. ಸಾರ್ವಜನಿಕವಾಗಿ ಮಾನಹಾನಿ ಮಾಡಿದ ಆರೋಪದಡಿ ಯುವತಿ ಬೆಂಗಳೂರಿನ ಪೀಣ್ಯ ಠಾಣೆಗೆ ಯುವಕನ ವಿರುದ್ಧ ದೂರು ದಾಖಲಿದ್ದಾಳೆ. ಹೌದು, ಇದು ಕಥೆಯಲ್ಲ, ನಿಜಕ್ಕೂ ನಡೆದ ಘಟನೆ.
ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಆನ್ಲೈನ್ನಲ್ಲಿ ಸೀಟ್ ಬುಕ್ ಮಾಡಿ ಯುವತಿ ಪ್ರಯಾಣಿಸುತ್ತಿದ್ದಳು. ಯುವತಿಯ ಪಕ್ಕವೇ ಯುವಕ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದ. ಆದರೆ ಏನಾಯಿತೋ ಏನೋ.. ಟಿ.ದಾಸರಹಳ್ಳಿ-ಜಾಲಹಳ್ಳಿ ಕ್ರಾಸ್ ಮಧ್ಯೆ ಪಕ್ಕದಲ್ಲಿ ಕುಳಿತಿದ್ದ ಯುವತಿಯನ್ನು ಯುವಕ ಚುಂಬಿಸಿ ಬಸ್ ಇಳಿದುಬಿಟ್ಟಿದ್ದಾನೆ. ಇದರಿಂದ ತನ್ನ ಮಾನಹಾನಿ ಆಗಿದೆ ಎಂದು ಯುವತಿ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354A, 354ರಡಿ ಪ್ರಕರಣ ದಾಖಲಿಸಿದ್ದಾಳೆ.