ಬಾಗಲಕೋಟೆ: ಕ್ವಾರಂಟೈನ್ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತನನ್ನು ತುಕಾರಾಮ ಪವಾರ್ (40) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಯಾದಗಿರಿ ಜಿಲ್ಲೆ ಜುಮಲಾಪುರ ತಾಂಡಾದವರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರು ಗ್ರಾಮದಲ್ಲಿ ಮೆ 16 ರಂದು ತುಕರಾಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೇ15 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ತುಕರಾಮ ಊರಿಗೆ ಬಂದಿದ್ದರು. ಮೇ 16ರ ಬೆಳಗ್ಗೆ ವಿಷಯ ತಿಳಿದು ಆಶಾ ಕಾರ್ಯಕರ್ತೆಯರು, ಪಂಚಾಯ್ತಿಯವರು ಕ್ವಾರಂಟೈನ್ ಆಗಬೇಕು. 14 ದಿನ ಕ್ವಾರಂಟೈನ್ ಗೆ ಇರಬೇಕು ಎಂದು ಸೂಚಿಸಿದ್ದರು. ಇಲ್ಲವಾದಲ್ಲಿ ನಿನ್ನ ಸ್ವಂತ ಊರಿಗೆ ತೆರಳುವಂತೆ ಸಲಹೆ ನೀಡಿದ್ರು. ಈ ವೇಳೆ ತುಕರಾಮ ಕ್ವಾರಂಟೈನ್ ಒಳಗಾಗಲು ನಿರಾಕರಿಸಿದ್ದು, ಹೆದರಿ ವಿಷ ಸೇವಿಸಿದ್ದರು.
ಕೂಡಲೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡೋದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.