ಬೆಂಗಳೂರು: ಬಿಡದಿಯಲ್ಲಿ ನೋಟಿಫಿಕೇಷನ್ ಆಗದ ಹಳ್ಳಿಗಳನ್ನು ನೋಟಿಫಿಕೇಷನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಡದಿಯ ರೈತರು ವಿಧಾನಸೌಧದಲ್ಲಿ ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಸಿಎಂ, “ನೂರಾರು ರೈತರು ಬಂದಿದ್ದರು. ಕೆಲ ಹಳ್ಳಿಗಳ ನೋಟಿಫಿಕೇಷನ್ ಆಗಿಲ್ಲ. ಸರ್ಕಾರ ಉತ್ತಮವಾದ ಪರಿಹಾರ ಕೊಡುತ್ತಿದೆ. ನೋಟಿಫಿಕೇಷನ್ ಆಗದ ಕಾರಣ ಪರಿಹಾರ ತೆಗೆದುಕೊಳ್ಳಲು ಆಗುತ್ತಿಲ್ಲ. ನೋಟಿಫಿಕೇಷನ್ ಮಾಡಿ ಎಂದು ರೈತರು ಮನವಿ ಮಾಡಿದ್ದಾರೆ. ನಾನು ಅಧಿಕಾರಗಳ ಜೊತೆಗೆ ಮಾತನಾಡುತ್ತೇನೆ. ಯಾವ ಯಾವ ಹಳ್ಳಿ ನೋಟಿಫಿಕೇಷನ್ ಆಗಿಲ್ಲ, ಆ ಹಳ್ಳಿಗಳ ನೋಟಿಫಿಕೇಷನ್ ಮಾಡಿ ಎಂದು ಹೇಳುತ್ತೇನೆ” ಎಂದರು.
“ಪಾದಯಾತ್ರೆ ಮಾಡ್ತಾ ಇದ್ದಾರೆ. 160 ರೈತರು ಮಾತ್ರ ಮೈಸೂರು, ಮಂಡ್ಯ ಭಾಗದಿಂದ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪಾದಯಾತ್ರೆ ಮಾಡಲಿ. ಅವರು ಎಷ್ಟು ಬೇಕಾದರೂ ನಡೆಯಲಿ. ಎಷ್ಟಾದರೂ ನಡೆಯಲಿ, ಹೋರಾಟ ಮಾಡಲಿ. ಅವರನ್ನು ಬಿಟ್ಟು ಬಿಡಿ ಎಂದು ಪೊಲೀಸರಿಗೆ ಹೇಳಿದ್ದೇನೆ” ಎಂದು ತಿಳಿಸಿದರು.
ಸಿಎಂ ಮುಂದೆ ರೈತರ ಮನವಿ ಏನು?: “ನಮಗೆ ರೆಡ್ ಝೋನ್ನಿಂದ ಮುಕ್ತಿ ಬೇಕು. ಬಿಡದಿ ಟೌನ್ಶಿಪ್ಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೇವೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು. ಯಾರದೋ ರಾಜಕೀಯ ಆಟಕ್ಕೆ ನಾವು ಬಲಿ ಆಗುತ್ತಿದ್ದೇವೆ. ನಾವು ಜಮೀನು ಕೊಡಲು ಸಿದ್ಧ. ತಕ್ಷಣವೇ ಪರಿಹಾರ ಕೊಡಿ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಲಿಲ್ಲ. ನೀವಾದರೂ ನಮ್ಮ ಕಷ್ಟ ಬಗೆಹರಿಸಿ” ಎಂದು ಸಿಎಂಗೆ ರೈತರು ಮನವಿ ಮಾಡಿದರು.
ಬೈರಮಂಗಲ ಗ್ರಾಮದ ಸುನೀಲ್ ಎಂಬವರು ಮಾತನಾಡಿ, “ಕಳೆದ 20 ವರ್ಷಗಳಿಂದ ನಾವು ರೆಡ್ ಝೋನ್ನಿಂದ ಸಂಕಷ್ಟ ಅನುಭವಿಸಿದ್ದೇವೆ. ಅಲ್ಲಿ ವೃಷಭಾವತಿ ಕೊಳಚೆ ನೀರಿನಿಂದ ವ್ಯವಸಾಯ ಕಷ್ಟವಾಗಿದೆ. ಕೆಲವು ಭಾಗದಲ್ಲಿ ತೆಂಗಿನ ತೋಟ ಮೇಲುನೋಟಕ್ಕೆ ಹಸಿರಾಗಿ ಕಾಣಬಹುದು. ಆದರೆ, ಇಳುವರಿ ಬರುತ್ತಿಲ್ಲ. ಕುಡಿಯುವ ಹಾಲು ಕೂಡ ಕಲುಷಿತಗೊಂಡಿದೆ. ರೆಡ್ ಝೋನ್ ಮಾಡಿರುವುದರಿಂದ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಆಸ್ಪತ್ರೆ, ಕಲ್ಯಾಣ ಮಂಟಪ ನಿರ್ಮಾಣ ಸಾಧ್ಯವಿಲ್ಲ. ನಮ್ಮ ಪಕ್ಕದ ಊರುಗಳಲ್ಲಿ ಬ್ಯಾಂಕ್ನಲ್ಲಿ ಜಮೀನಿಗೆ 1 ಕೋಟಿವರೆಗೆ ಸಾಲ ಕೊಟ್ಟರೆ ನಮಗೆ 1 ಲಕ್ಷ ರೂಪಾಯಿ ಕೂಡ ಸಾಲ ಸಿಗುತ್ತಿಲ್ಲ. ನಮಗೆ ಮದುವೆ ಹಾಗೂ ಕಷ್ಟಕಾಲದಲ್ಲಿ ನಮ್ಮ ಜಮೀನು ಮಾರಲು ಆಗುತ್ತಿಲ್ಲ. ಇವೆಲ್ಲವೂ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರ ಕೊಡುಗೆ. ಹೀಗಾಗಿ ನಮಗೆ ಈ ಸಮಸ್ಯೆಗಳಿಂದ ಮುಕ್ತಿ ದೊರಕಿಸಬೇಕು” ಎಂದು ಕೋರಿದರು.
Laxmi News 24×7