ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಮತ್ತು ಕಸ ಎಸೆದರೆ 1,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಹಾಗೂ ಕಸ ಎಸದರೆ ಅವರಿಗೆ ದಂಡ ಹಾಕುತ್ತೇವೆ ಎಂದು ಬಿಬಿಎಂಪಿ ತಿಳಿಸಿದೆ. ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಅಥವಾ ಕಸ ಹಾಕಿದರೆ 1,000 ರೂಪಾಯಿ ದಂಡ ಹಾಕಲಾಗುತ್ತದೆ. ಆದರೆ ಪುನಃ ಎರಡನೇ ಬಾರಿಗೆ ಇದೇ ತಪ್ಪು ಮುಂದುವರೆಸಿದರೆ ದಂಡದ ಮೊತ್ತ ಡಬಲ್ ಆಗಲಿದೆ. ಅಂದರೆ 2,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಶೇಷ ಆಯುಕ್ತರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ ವಾರ್ಡ್ ಸಂಖ್ಯೆ 157ರ ನ್ಯೂ ಟಿಂಬರ್ ಲೇಔಟ್ನ ಸಾರ್ವಜನಿಕ ಸ್ಥಳದಲ್ಲಿ ಮಾಂಸ ತ್ಯಾಜ್ಯವನ್ನು ಮದ್ದೂರಮ್ಮ ಚಿಕನ್ ಸೆಂಟರ್ ನವರು ಅತಿಕ್ರವಾಗಿ ಎಸೆದಿದ್ದರು. ಇದನ್ನು ಪತ್ತೆ ಹೆಚ್ಚಿದ ಮಾರ್ಷಲ್ಸ್ ಗಳು ಮಾಂಸದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿರುವುದನ್ನು ಕೂಡ ಟ್ವಿಟ್ ಮಾಡಿದ್ದಾರೆ.
ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿದ್ದು, ಇಂದು ಒಂದೇ ದಿನ 36 ಮಂದಿಗೆ ಸೋಂಕಿ ತಗುಲಿರುವುದು ವರದಿಯಾಗಿದೆ. ಬೆಳಗ್ಗೆ ಒಟ್ಟು 34 ಜನರಿಗೆ ಸೋಂಕು ತಗುಲಿರೋದು ದೃಢ ಪಟ್ಟಿತ್ತು. ಆ ಸಂಖ್ಯೆ ಮತ್ತಿಬ್ಬರು ಸೇರಿದ್ದು 36 ಆಗಿದೆ. ಕಲಬುರಗಿಯ 5 ವರ್ಷದ ಬಾಲಕ ಮತ್ತು 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 5 ವರ್ಷದ ಬಾಲಕನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನು 32 ವರ್ಷ ವ್ಯಕ್ತಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಬೆಳೆಸಿದ್ದರು.