ಅಥಣಿ ಗ್ರಾಮೀಣ: ಅಥಣಿ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕುಡಿಯುವ ನೀರು, ರಸ್ತೆ, ಶಾಲಾ ಕಟ್ಟಡ, ಸಮುದಾಯ ಭವನ ಹಾಗೂ ನೀರಾವರಿ ಯೋಜನೆ ಕೈಗೊಂಡು ರೈತಪರ ಮತ್ತು ಜನಸ್ನೇಹಿಯಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಹಿಪ್ಪರಗಿ ತೋಟಶಾಲೆ ಬಳಿ 2.50 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬಾಂದಾರ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಯಲಿಹಡಲಗಿಯಿಂದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ಗಡಿವರೆಗಿನ ರಸ್ತೆ ಡಾಂಬರೀಕರಣಕ್ಕೆ 8.5 ಕೋಟಿ ರೂ. ಹಾಗೂ ಬಸವೇಶ್ವರ ದೇವಸ್ಥಾನದ ಸಮುದಾಯ
ಭವನಕ್ಕೆ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಜೂನ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಕೆರೆ ತುಂಬುವ ಯೋಜನೆಯಿಂದ ಗ್ರಾಮಕ್ಕೆ ಬಹಳಷ್ಟು ಅನುಕೂಲವಾಗಿದೆ. ಕೊಟ್ಟಲಗಿ ಅಮ್ಮಾಜೇಶ್ವರಿ ಯೋಜನೆಯಡಿ ಉಳಿದ ಪ್ರದೇಶಕ್ಕೂ ನೀರು ಪೂರೈಸುವ ಕೆಲಸ ಭರದಿಂದ ಸಾಗಿದೆ. ಈ ಎರಡೂ ಯೋಜನೆಗಳಿಂದ ಅಡಹಳ್ಳಟ್ಟಿ ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದರು.
ತಾಪಂ ಮಾಜಿ ಸದಸ್ಯ ಶಿವು ಗುಡ್ಡಾಪುರ ಮಾತನಾಡಿ, ಅಥಣಿ ಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಗಳನ್ನು ಒಂದೊಂದಾಗಿ ಶಾಸಕ ಲಕ್ಷ್ಮಣ ಸವದಿ ಈಡೇರಿಸುತ್ತಿದ್ದಾರೆ ಎಂದರು.
ಪಿಕೆಪಿಎಸ್ ಅಧ್ಯಕ್ಷ ಘಟಿವಾಳಪ್ಪ ಗುಡ್ಡಾಪುರ, ಮಹಾದೇವ ಹಿಪ್ಪರಗಿ, ನಿಂಗಯ್ಯ ಮಠಪತಿ, ಶ್ರೀಶೈಲ ತಾಂವಶಿ, ಚಿದಾನಂದ ಮಠಪತಿ, ಪರಗೊಂಡ ಗುಡ್ಡಾಪುರ, ಈರಗೌಡ ಪಾಟೀಲ, ಅಡಿವೆಪ್ಪ ಕೆಂಚಣ್ಣವರ, ಸೂರ್ಯಕಾಂತ ಡಂಬಳಕರ, ಸಣ್ಣ ನೀರಾವರಿ ಇಲಾಖೆ
ಎಇಇ ಪ್ರವೀಣ ಪಾಟೀಲ, ಎಸ್.ಎಸ್.ಮಾಕಾಣಿ, ಸದಾಶಿವ ಸವದಿ, ನಿಂಗಪ್ಪ ಬಿರಾದಾರ, ರಾಮು ಹೊನವಾಡ, ಸೋಮನಿಂಗ ಬಿದರೊಳ್ಳಿ ಇತರರಿದ್ದರು. ಶಿಕ್ಷಕ ಎಸ್.ಕೆ.ಖೋತ ಸ್ವಾಗತಿಸಿದರು. ಸಾಧಿವ ಗುಡ್ಡಾಪುರ ನಿರೂಪಿಸಿದರು.
Laxmi News 24×7