ನವದೆಹಲಿ: ನೇಪಾಳದಲ್ಲಿ ಉಂಟಾದ ರಣಭೀಕರ ಪ್ರವಾಹದಲ್ಲಿ 288 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಮಾಹಿತಿ ಹಂಚಿಕೊಂಡಿದೆ.
ಈ ದುರಂತದಲ್ಲಿ 270 ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ , ನಾಪತ್ತೆಯಾಗಿರುವ ಭಾರತೀಯರ ಪತ್ತೆಗೆ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೇಪಾಳದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿಗಳೊಂದಿಗೆ ಮಾತನಾಡಿ, ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ನೇಪಾಳದ ಜನತೆಯೊಂದಿಗೆ ಭಾರತ ದೃಢವಾಗಿ ನಿಂತಿದ್ದು, ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ. ಒಟ್ಟು 288 ಭಾರತೀಯ ಪ್ರಜೆಗಳು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರಲ್ಲಿ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 73 ಮಂದಿ ಸೇರಿದ್ದಾರೆ. ಈ ಎಲ್ಲರ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಕಠ್ಮಂಡು ರಾಯಭಾರ ಕಚೇರಿ ಯೋಜನಾ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದೆ ಎಂದು ವಿವರಿಸಿದರು.
ನಾಪತ್ತೆಯಾಗಿರುವ ಭಾರತೀಯರ ರಾಜ್ಯವಾರು ಮಾಹಿತಿ
ವಿದೇಶಾಂಗ ಸಚಿವಾಲಯದ ಪ್ರಕಾರ, ನಾಪತ್ತೆಯಾಗಿರುವ ಭಾರತೀಯರನ್ನ 5 ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಇವರಲ್ಲಿ ತ್ರಿಶೂಲಿ-1 ವಿದ್ಯುತ್ ಯೋಜನೆಯ ಕಾರ್ಮಿಕರು ಹಾಗೂ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಯಾತ್ರಿಕರು ಸೇರಿದ್ದಾರೆ.
* 73 ಮಂದಿ – ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು.
* 37 ಮಂದಿ – ಸಾಮ್ರಾಟ್ ಟ್ರಾವೆಲ್ಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ತಮಿಳಿಗರು.
* 49 ಮಂದಿ – ಫ್ಲೈ ಎವರೆಸ್ಟ್ ಟ್ರಾವೆಲ್ಸ್ ಮೂಲಕ ಯಾತ್ರೆಗೆ ತೆರಳಿದ್ದ ತಮಿಳುನಾಡಿನವರು.
* 32 ಮಂದಿ – ಸಮ್ರಾಟ್ ಟ್ರಾವೆಲ್ಸ್ ನೆರವಿನಿಂದ ಪ್ರಯಾಣಿಸಿದ್ದ ಪಶ್ಚಿಮ ಬಂಗಾಳದವರು.
* 61 ಮಂದಿ – ವಿವಿಧ ರಾಜ್ಯಗಳಿಗೆ ಸೇರಿದ ಭಾರತೀಯರು.
* 33 ಮಂದಿ – ಕೇರಳದವರು
21 ಭಾರತೀಯರ ರಕ್ಷಣೆ
ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಿಂದ 21 ಭಾರತೀಯರನ್ನ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಎಲ್ಲರೂ ತಮಿಳುನಾಡಿನವರು ಎಂದು ಜೈಸ್ವಾಲ್ ಮಾಹಿತಿ ನೀಡಿದರು.
ಇದೇ ವೇಳೆ, ಚೀನಾದ ಭಾಗದಲ್ಲಿರುವ ಟಿಬೆಟ್ನಲ್ಲಿ ಸಿಲುಕಿರುವ ಸುಮಾರು 200 ಭಾರತೀಯರು ನೆರವು ಕೋರಿ ಸಂಪರ್ಕಿಸಿದ್ದಾರೆ. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ತಮಿಳುನಾಡಿನ 21 ಭಾರತೀಯರನ್ನು ನಾವು ರಕ್ಷಿಸಿದ್ದೇವೆ. ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಹಲವು ಭಾರತೀಯರು ಚೀನಾದ ಭಾಗದಲ್ಲಿ ಸಿಲುಕಿರುವ ಮಾಹಿತಿ ನಮಗೆ ಬಂದಿದೆ. ಸುಮಾರು 200 ಭಾರತೀಯರು ಸ್ಥಳಾಂತರಕ್ಕಾಗಿ ನಮ್ಮ ನೆರವನ್ನು ಕೋರಿದ್ದಾರೆ. ಅವರಲ್ಲಿ 95 ಮಂದಿ ಗಾರ್ಚನ್ನಲ್ಲಿದ್ದು, ನೇಪಾಳಕ್ಕೆ ಪ್ರವೇಶಿಸಲು ಬಿಲ್ಸಾ ಕಡೆಗೆ ತೆರಳುತ್ತಿದ್ದಾರೆ. ನಾಲ್ವರು ಗೀಲಾಂಗ್ ನಗರದಲ್ಲಿದ್ದು, 13 ಮಂದಿ ಜುತುಲ್ಪೋದಲ್ಲಿದ್ದಾರೆ. ಇವರು ಸಾಗಾ ಪಟ್ಟಣದತ್ತ ತೆರಳುತ್ತಿದ್ದಾರೆ. ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದೆ ಎಂದು ಜೈಸ್ವಾಲ್ ಹೇಳಿದರು.
Laxmi News 24×7