ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಕ್ರೀಡಾ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ, ಕ್ರೀಡಾ ಕ್ಷೇತ್ರಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಜುಲೈ 2026ರ ವೇಳೆಗೆ ದೇಶದಾದ್ಯಂತ ಖೇಲೋ ಇಂಡಿಯಾ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಅಲ್ಲದೇ, 349 ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಸುಮಾರು 3,176 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಹೇಳಿದರು.
2026ನೇ ಸಾಲಿನ ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತವಾಗಿ ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನಲ್ಲಿ ನಡೆದ `ಖೇಲೋ ಇಂಡಿಯಾ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿ. ಸೋಮಣ್ಣನವರು ಮಾತನಾಡಿದರು. ಇದೇ ವೇಳೆ ಮುಂದುವರೆದು ಮಾತನಾಡಿದ ಅವರು, ದೇಶದ ಕ್ರೀಡಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿರುವ ಹಾಕಿ ದಂತಕಥೆ, ಮೇಜರ್ ಧ್ಯಾನ್ ಚಂದ್ ಅವರನ್ನು ಸ್ಮರಿಸಿದರು.
ಕ್ರೀಡೆಯಲ್ಲಿ ಯಶಸ್ಸು ಎಂದರೆ ಕೇವಲ ಪದಕ ಗೆಲ್ಲುವುದು ಅಲ್ಲ. ಅದು ಶಿಸ್ತು, ಸಮರ್ಪಣೆ, ಪರಿಶ್ರಮ, ಟೀಮ್ ಸ್ಪಿರಿಟ್, ಸೋಲನ್ನು ಎದುರಿಸುವ ಧೈರ್ಯ ಮತ್ತು ದೇಶಕ್ಕಾಗಿ ಸೇವೆ ಮಾಡುವ ಮನೋಭಾವ ಕಲಿಸುತ್ತದೆ. ಇಂದು ದೇಶದಾದ್ಯಂತ ಯುವಜನರು ಒಂದೇ ವೇದಿಕೆಯಲ್ಲಿ ಸೇರಿ, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರೀಡೆ ಮತ್ತು ಯುವಜನತೆಯ ಕುರಿತ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಯುವಜನರ ಆಸೆ-ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು ಮುಂದಿನ ಕಾರ್ಯನೀತಿಯನ್ನು ರೂಪಿಸುವುದು ಇಂದಿನ `ಯುವ ಸಂವಾದ’ ಕಾರ್ಯಕ್ರಮದ ಉದ್ದೇಶ ಎಂದರು.
ಕಳೆದ 12 ವರ್ಷಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ, ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಮಹತ್ವದ ಪರಿವರ್ತನೆಯನ್ನು ಕಂಡಿದೆ. ಜುಲೈ 2026ರ ವೇಳೆಗೆ ದೇಶಾದ್ಯಂತ 1,067 ಖೇಲೋ ಇಂಡಿಯಾ ಕೇಂದ್ರಗಳು ಸ್ಥಾಪನೆಯಾಗಿವೆ. 349 ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಸುಮಾರು 3,176 ಕೋಟಿ ಹೂಡಿಕೆಯೊಂದಿಗೆ ಅನುಮೋದನೆ ನೀಡಲಾಗಿದೆ. 267 ಕ್ರೀಡಾ ಅಕಾಡೆಮಿಗಳಿಗೆ ಬೆಂಬಲ ನೀಡಲಾಗುತ್ತಿದೆ ಮತ್ತು ಸಾವಿರಾರು ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಇತರ ನೆರವು ಒದಗಿಸಲಾಗುತ್ತಿದೆ ಎಂದು ಕ್ರೀಡಾ ಕ್ಷೇತ್ರದ ಪ್ರಗತಿಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿರುವ ಬಗ್ಗೆ ತಿಳಿಸಿದರು.
ಹಿಂದೆಲ್ಲಾ, ಭಾರತದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಕೇವಲ ಸ್ಪರ್ಧಿಸಿದ್ರೆ ಸಾಕು, ಪದಕ ಗೆಲ್ಲುವುದೆಲ್ಲಾ ನಮ್ಮಂತ ಬಡ ರಾಷ್ಟ್ರಗಳಿಗಲ್ಲ ಎಂಬ ಧೋರಣೆ ಇತ್ತು. ಆದರೆ ಇಂದು ಪ್ರತಿಭೆಯನ್ನು ಎಷ್ಟು ಬೇಗ ಗುರುತಿಸಿ, ವೈಜ್ಞಾನಿಕವಾಗಿ ಬೆಳೆಸಿ, ವಿಶ್ವ ವೇದಿಕೆಗೆ ಕೊಂಡೊಯ್ಯಬಹುದು ಎಂಬ ಚಿಂತನೆ ಸಮಾಜದಲ್ಲಿ ಹಾಗೂ ಕ್ರೀಡಾ ಆಡಳಿತ ವರ್ಗದಲ್ಲಿ ಉಂಟಾಗುತ್ತಿದೆ. ಇದು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಆಗಿರುವ ದೊಡ್ಡ ಬದಲಾವಣೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ, ಪ್ಯಾರಿಸ್ ಒಲಿಂಪಿಕ್ಸ್ಗಳಲ್ಲಿ ಭಾರತ ಅನೇಕ ಪದಕಗಳನ್ನು ಗೆದ್ದಿತು. ನಮ್ಮ ಹಾಕಿ ತಂಡ ಸತತ ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದು ತನ್ನ ವೈಭವವನ್ನು ಮರಳಿ ಪಡೆದಿದೆ. ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ 107 ಪದಕಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕ್ರೀಡೆ ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
2026-27ರ ಕೇಂದ್ರ ಬಜೆಟ್ನಲ್ಲಿ `ಖೇಲೋ ಇಂಡಿಯಾ ಮಿಷನ್’ ಘೋಷಿಸಲಾಗಿದೆ. ಕ್ರೀಡಾ ಕ್ಷೇತ್ರದ ಪರಿವರ್ತನೆಗೆ ದೀರ್ಘಕಾಲೀನ ಮತ್ತು ಫಲಿತಾಂಶ ಆಧಾರಿತ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶ ಇದರದ್ದಾಗಿದೆ. `ಮೇಕ್ ಇನ್ ಇಂಡಿಯಾ’ ಯೋಜನೆಯಡಿ ದೇಶೀಯವಾಗಿ ಕ್ರೀಡಾ ಸಾಮಗ್ರಿಗಳ ಉತ್ಪಾದನೆಗೆ 500 ಕೋಟಿಯ ವಿಶೇಷ ಅನುದಾನವನ್ನೂ ಘೋಷಿಸಲಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಬಿಲಿಯರ್ಡ್ಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಆದರೆ ಈಗ ಕರ್ನಾಟಕದ ಗುರಿ ಕೇವಲ ಕೆಲವು ಚಾಂಪಿಯನ್ಗಳನ್ನು ಸೃಷ್ಟಿಸುವುದಲ್ಲ. ಪ್ರತಿ ಜಿಲ್ಲೆಯಲ್ಲಿ, ಪ್ರತಿ ವಿಶ್ವವಿದ್ಯಾಲಯದಲ್ಲಿ ಮತ್ತು ಪ್ರತಿ ಪ್ರತಿಭಾವಂತ ಯುವಕ-ಯುವತಿಗೂ ಕ್ರೀಡಾ ಪ್ರಗತಿಯ ಒಂದು ಸ್ಪಷ್ಟ ಮಾರ್ಗವನ್ನು ನಿರ್ಮಿಸುವುದು ನಮ್ಮ ಗುರಿಯಾಗಬೇಕು. ನಮ್ಮ ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣದ ಕೇಂದ್ರಗಳಷ್ಟೇ ಅಲ್ಲದೇ, ಕ್ರೀಡೆಯ ಮೂಲಕ ವಿಕಸಿತ ಭಾರತ ನಿರ್ಮಾಣದ ಕೇಂದ್ರವಾಗಬೇಕು ಎಂದರು.
ಕ್ರೀಡೆ ಮತ್ತು ಯುವ ಸಬಲೀಕರಣ ಒಂದೇ ನಾಣ್ಯದ ಎರಡು ಮುಖಗಳು. ಈ ದೃಷ್ಟಿಕೋನದಲ್ಲಿಯೇ `ಮೇರಾ ಯುವ ಭಾರತ್’ `ಮೈ ಭಾರತ್’ ಅತ್ಯಂತ ಮಹತ್ವದ್ದಾಗಿದೆ. 2023ರಲ್ಲಿ ಆರಂಭವಾದ `ಮೈ ಭಾರತ್’ ಯುವಜನರಿಗೆ ಸ್ವಯಂಸೇವೆ, ಅನುಭವ ಆಧಾರಿತ ಕಲಿಕೆ, ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ವೇದಿಕೆಯನ್ನು ಒದಗಿಸುತ್ತಿದೆ. ಯುವಜನರು ಅಭಿವೃದ್ಧಿಯ ಫಲಾನುಭವಿಗಳಷ್ಟೇ ಅಲ್ಲ; ಅಭಿವೃದ್ಧಿಯ ಪಾಲುದಾರರೂ ಆಗಬೇಕು ಎಂದು ತಿಳಿಸಿದರು.
ವಿಕಸಿತ ಭಾರತಕ್ಕಾಗಿ ಯುವ ಸಬಲೀಕರಣ ಅತ್ಯಂತ ಪ್ರಧಾನವಾದ ಅಂಶವಾಗಿದೆ. ಒಬ್ಬ ಯುವಕ/ಯುವತಿಯಾಗಿ `ವಿಕಸಿತ್ ಭಾರತ @ 2047′ ಕನಸನ್ನು ಸಾಕಾರಗೊಳಿಸಲು – ನಾನು ನನ್ನ ಕಾಲೇಜಿಗಾಗಿ, ನನ್ನ ಸಮಾಜಕ್ಕಾಗಿ, ನನ್ನ ಕರ್ನಾಟಕಕ್ಕಾಗಿ ಮತ್ತು ನನ್ನ ದೇಶಕ್ಕಾಗಿ ಏನು ಮಾಡಬಹುದು? ಎಂದು ಯೋಚಿಸಬೇಕು. ಈ ಮನೋಭಾವವೇ ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಎಂದು ನುಡಿದರು.
ನೀವು ಕಾನೂನು ವಿದ್ಯಾರ್ಥಿಗಳು. ಆದ್ದರಿಂದ ನಿಮ್ಮ ಜವಾಬ್ದಾರಿ ಇನ್ನಷ್ಟು ವಿಶೇಷವಾಗಿದೆ. ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಕೇವಲ ತಮ್ಮ ಹಕ್ಕುಗಳನ್ನು ತಿಳಿದಿರುವ ಯುವಕರು ಮಾತ್ರವಲ್ಲ; ತಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಂಡಿರುವ ಯುವಕರೂ ಬೇಕು. ರೈಲ್ವೆ ಸಚಿವನಾಗಿಯೂ ನಾನು ಒಂದು ವಿಶೇಷ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಭಾರತೀಯ ರೈಲ್ವೆ ಹಲವು ದಶಕಗಳಿಂದ ಭಾರತೀಯ ಕ್ರೀಡೆಯ ಪ್ರಮುಖ ಬೆಂಬಲಿಗ ಸಂಸ್ಥೆಯಾಗಿದೆ. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ 1928ರಿಂದ ಕ್ರೀಡೆಯನ್ನು ಉತ್ತೇಜಿಸುತ್ತಿದೆ. ಇಂದು ಭಾರತೀಯ ರೈಲ್ವೆಯಲ್ಲಿ 9,000ಕ್ಕೂ ಹೆಚ್ಚು ಕ್ರೀಡಾಪಟುಗಳು 29 ಕ್ರೀಡಾ ವಿಭಾಗಗಳಲ್ಲಿ ಇದ್ದಾರೆ ಎಂದರು.
2036ರ ಒಲಿಂಪಿಕ್ಸ್ ಅನ್ನು ಭಾರತದಲ್ಲಿ ಆಯೋಜಿಸುವ ನಮ್ಮ ಮಹತ್ವಾಕಾಂಕ್ಷೆಗೆ ಉತ್ತೇಜನ ನೀಡಲು, ಪ್ರಧಾನಮಂತ್ರಿಗಳು ದೇಶದಾದ್ಯಂತ ಬಾಲ ಪ್ರತಿಭೆಗಳನ್ನು ಗುರುತಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಇಂದು 5-8 ವರ್ಷದ ವಯಸ್ಸಿನ ಸುಪ್ತ ಪ್ರತಿಭೆ ಹೊಂದಿರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಕೋಚಿಂಗ್, ಆಧುನಿಕ ಸೌಲಭ್ಯಗಳು ತಲುಪುವಂತೆ ಮಾಡಿ 2036ರ ಓಲಿಂಪಿಕ್ಗೆ ಅವರನ್ನು ವಿಶ್ವಮಟ್ಟದ ಕ್ರೀಡಾಪಟುವನ್ನಾಗಿ ರೂಪಿಸುವುದು ನಮ್ಮ ಜವಾಬ್ದಾರಿ. ಇದೇ ಮುಂದಿನ ಹಂತದ ಖೇಲೋ ಇಂಡಿಯಾ ಎಂದು ಹೇಳಿದರು.
ಅನಂತರ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣನವರು, ಪ್ರಧಾನಿ ನರೇಂದ್ರ ಮೋದಿಜೀಯವರು ಖೇಲೋ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ದೇಶದ ಯುವಜನತೆಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದವನ್ನು ವೀಕ್ಷಿಸಿದರು.
ಈ ಸಮಾರಂಭದಲ್ಲಿ, ಮೈ ಭಾರತ್ ದಕ್ಷಿಣಾ ವಿಭಾಗದ ನಿರ್ದೇಶಕರಾದ ಅಶೋಕ್ ಕುಮಾರ್, ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕರಾದ ಆನಂದ್ ರಾಮ್, ಸಿಎಒ ಕರಿಸಿದ್ದಪ್ಪ, ಸಿಇಒ ವಿಶ್ವನಾಥ, ಪ್ರೊ. ಉಮಾ ಮಹೇಶ್, ಧ್ಯಾನ್ಚಂದ್ ಪ್ರಶಸ್ತಿ ಪುರಸ್ಕೃತೆ ಹಾಗೂ ಕ್ರೀಡಾ ತಾರೆ ತೃಪ್ತಿ ಮುರುಗುಂಡೆ ಹಾಗೂ ಪ್ಯಾರಾ ಒಲಿಂಪಿಕ್ಸ್ ಅಥ್ಲೀಟ್ ಹಾಗೂ ಕ್ರೀಡಾ ತಾರೆ ಹರ್ಷಿತಾ ರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Laxmi News 24×7