Breaking News

ದೇಶಾದ್ಯಂತ 41 ಅಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಮುಂದಾದ ಕೇಂದ್ರ; 579 ಕೇಂದ್ರಗಳಲ್ಲಿ ಮೇಲ್ವಿಚಾರಣೆಗೆ ಜೋಶಿ ನಿರ್ದೇಶನ

Spread the love

ನವದೆಹಲಿ: ಶ್ರಾವಣ ಬಂತೆಂದರೆ ಹಬ್ಬ ಹರಿದಿನ, ಧಾರ್ಮಿಕ ಮಹೋತ್ಸವ ಹಾಗೂ ವಿವಾಹ ಸಮಾರಂಭಗಳ ಸುಗ್ಗಿ ಶುರುವಾದಂತೆ. ಈ ಹಂಗಾಮಿನಲ್ಲಿ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡುಬರುತ್ತದೆ. ಆದರೆ, ಕೇಂದ್ರ ಸರ್ಕಾರ ಈ ಬಾರಿ ಹಬ್ಬಗಳ ಋತುವಿನ ಆರಂಭದಿಂದಲೇ ಬೆಲೆ ಸ್ಥಿರೀಕರಣಕ್ಕೆ ಆದ್ಯತೆ ನೀಡಿದೆ.

ನಾಗರ ಪಂಚಮಿ, ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ ಚತುರ್ಥಿ, ದಸರಾ, ದೀಪಾವಳಿಯಂತಹ ಹಬ್ಬಗಳ ಋತುವಿನಲ್ಲೂ ಹಾಲು, ಬೇಳೆಕಾಳು ಮತ್ತು ತರಕಾರಿ ಸೇರಿದಂತೆ 41 ಬಗೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮತ್ತು ಸ್ಥಿರವಾಗಿರಿಸಲು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರ ಮುಂದಾಳತ್ವದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

NCCF, NAFED, ಕೇಂದ್ರೀಯ ಭಂಡಾರ್ ಮತ್ತು ಇತರ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಗತ್ಯ ವಸ್ತುಗಳು ತಲುಪುವಂತೆ ಸಮಯೋಚಿತವಾಗಿ ಮುಂದಡಿ ಇರಿಸಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ, ನಾಸಿಕ್‌ನಿಂದ ದೇಶದ 5 ಪ್ರಮುಖ ನಗರಗಳಿಗೆ ಕಾಂದಾ ಎಕ್ಸ್‌ಪ್ರೆಸ್‌ ರೈಲು ಮೂಲಕ ಈರುಳ್ಳಿ ಪೂರೈಕೆಗೆ ಚಾಲನೆ ನೀಡಿದೆ.

35 ರೂ. ಬೆಲೆಯಲ್ಲಿ ಈರುಳ್ಳಿ ಲಭ್ಯ:
ಈಗಾಗಲೇ ದೆಹಲಿಯ ಮಾರುಕಟ್ಟೆಗಳಲ್ಲಿ ಕೆಜಿಗೆ 35 ರೂ. ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ನೋಡಿಕೊಂಡಿದ್ದು, ಮೊಬೈಲ್‌ ವಾಹನಗಳಲ್ಲಿ ಹಾಗೂ NCCF, NAFEDನ ಚಿಲ್ಲರೆ ಮಾರಾಟ ಮಳಿಗೆ, ಸಫಲ್ ಮತ್ತು ಕೇಂದ್ರೀಯ ಭಂಡಾರ್ ಮಳಿಗೆಗಳ ಮೂಲಕವೂ ಇದೇ ಬೆಲೆಯಲ್ಲಿ ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಸಾಕಷ್ಟು ಲಭ್ಯತೆಗಾಗಿ ಕೇಂದ್ರ ಸರ್ಕಾರ ಬಫರ್ ಸ್ಟಾಕ್‌ನಿಂದ ಈರುಳ್ಳಿ ಸರಬರಾಜು ಮಾಡುತ್ತಿದೆ.

ಪ್ರಸ್ತುತದಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ, 2026-27ರ ಅವಧಿಯಲ್ಲಿ ಬೆಲೆ ಸ್ಥಿರೀಕರಣ ನಿಧಿ (PSF) ಬಫರ್‌ಗಾಗಿ 2.00 LMT ರಬಿ ಈರುಳ್ಳಿ ಖರೀದಿಗೆ ಗುರಿ ನಿಗದಿಪಡಿಸಿದ್ದು, NAFED ಮತ್ತು NCCF ಮೂಲಕ ಮೇ 15ರಿಂದ ಬಫರ್‌ಗಾಗಿ ಸುಮಾರು 1.21 LMT ಈರುಳ್ಳಿ ಖರೀದಿಸಿದೆ. ಕೇಂದ್ರೀಯ ಗೋದಾಮು ನಿಗಮ (CWC) 2026-27ರ ಅವಧಿಯಲ್ಲಿ PSF ಈರುಳ್ಳಿ ಬಫರ್‌ಗಾಗಿ ಇದೇ ಮೊದಲ ಬಾರಿಗೆ ಶೇಖರಣಾ ಸಂಸ್ಥೆಯಾಗಿ ತೊಡಗಿಸಿಕೊಂಡಿದೆ.

ಎಲ್ಲಾ ರಾಜ್ಯಗಳಲ್ಲೂ ಬೆಲೆ ಏರಿಕೆ ಮೇಲೆ ನಿಗಾ
ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳಲ್ಲೂ ಈರುಳ್ಳಿ ಬೆಲೆ, ಬೇಡಿಕೆ ಮತ್ತು ಲಭ್ಯತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾಕಷ್ಟು ಸರಬರಾಜು ಮಾಡುವ ಜತೆಗೆ ಅನಗತ್ಯ ಬೆಲೆ ಏರಿಕೆ ತಡೆಗೆ ಮಧ್ಯಸ್ಥಿಕೆ ವಹಿಸಿ ಗ್ರಾಹಕರ ಹಿತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಓಣಂ, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ ಮತ್ತು ವಿವಾಹ ಋತು ಸೇರಿದಂತೆ ಹಬ್ಬದ ಋತುವಿನಲ್ಲಿ ಅನಗತ್ಯ ಬೆಲೆ ಏರಿಳಿತ ತಡೆಗಟ್ಟಲು ಬಫರ್ ಸ್ಟಾಕ್‌ನಿಂದ ಈರುಳ್ಳಿ ಪೂರೈಸುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಸಿಕ್‌ನಿಂದ ನವದೆಹಲಿಗೆ ಕಾಂಡಾ ಎಕ್ಸ್‌ಪ್ರೆಸ್ ರೈಲು ಮೂಲಕ ಈರುಳ್ಳಿ ಸಾಗಣೆ ಆರಂಭಿಸಿದೆ.

ಮೊಬೈಲ್‌ ವ್ಯಾನ್‌, ಮಳಿಗೆಗಳಲ್ಲಿ ಚಿಲ್ಲರೆ ಮಾರಾಟ ವ್ಯವಸ್ಥೆ
ಮಾರುಕಟ್ಟೆಗಳಲ್ಲಿ ಬೇಡಿಕೆ ಆಧಾರದ ಮೇಲೆ ಬಫರ್ ಈರುಳ್ಳಿಯನ್ನು ಗ್ರಾಹಕ ಕೇಂದ್ರಗಳಿಗೆ ಸಕಾಲಿಕವಾಗಿ ಸಾಗಿಸಲು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, NCCF, NAFED ಮತ್ತು ಕೇಂದ್ರೀಯ ಭಂಡಾರ್ ಮೂಲಕ ಒಟ್ಟಾರೆ 122 ಮಳಿಗೆಗಳಲ್ಲಿ ಹಾಗೂ 90 ಮೊಬೈಲ್‌ ವ್ಯಾನ್‌ಗಳಲ್ಲಿ ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಂಡಾ ಎಕ್ಸ್‌ಪ್ರೆಸ್ ನಾಸಿಕ್‌ನಿಂದ ಅದಾಗಲೇ ದೆಹಲಿ ತಲುಪಿದ್ದರೆ, ಇತ್ತ ಚೆನ್ನೈ, ಕೋಲ್ಕತ್ತಾ, ಎರ್ನಾಕುಲಂ, ಗುವಾಹಟಿ, ವಾರಣಾಸಿ, ಲಕ್ನೋ, ಪಾಟ್ನಾ, ಚಂಡೀಗಢ, ಜಮ್ಮು ಮತ್ತು ಅಮೃತಸರಗಳಿಗೆ ರಸ್ತೆ ಸಾರಿಗೆ ಮೂಲಕ ಈರುಳ್ಳಿ ಸಾಗಿಸಲಾಗುತ್ತಿದೆ.

579 ಕೇಂದ್ರಗಳಲ್ಲಿ ದೈನಂದಿನ ಮೇಲ್ವಿಚಾರಣೆಗೆ ನಿರ್ದೇಶನ
ಇನ್ನು ದೇಶೀಯ ಮಾರುಕಟ್ಟೆಗಳಲ್ಲಿ ಈರುಳ್ಳಿ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುಮುಖವಾಗುತ್ತಲೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಸಚಿವ ಜೋಶಿ ಅವರು ಮೇಲ್ವಿಚಾರಣೆಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ದೇಶಾದ್ಯಂತ 579 ಕೇಂದ್ರಗಳಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಒಟ್ಟು 41 ಬಗೆಯ ಅಗತ್ಯ ವಸ್ತುಗಳ ಪೂರೈಕೆ, ಬೇಡಿಕೆ, ಸರಬರಾಜು ಮತ್ತು ಬೆಲೆ ಏರಿಕೆ ಮೇಲೆ ಕಣ್ಣಿಟ್ಟಿದೆ. ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತ ಬೆಲೆ ಸ್ಥಿರೀಕರಣಕ್ಕೆ ಆದ್ಯತೆ ನೀಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ, ಆಲೂಗಡ್ಡೆ ಮತ್ತು ಕಡಲೆಬೇಳೆ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ತೊಗರಿ, ಕಡಲೆ, ಮಸೂರ್, ಉದ್ದು ಮತ್ತು ಹೆಸರುಕಾಳು ಸೇರಿದಂತೆ ಪ್ರಮುಖ ದ್ವಿದಳ ಧಾನ್ಯಗಳು ಹಾಗೂ ಟೊಮೆಟೊ, ಆಲೂಗಡ್ಡೆಯಂತಹ ಅಗತ್ಯ ತರಕಾರಿಗಳ ಬೆಲೆಗಳೂ ಸ್ಥಿರವಾಗಿದ್ದು, ಇವುಗಳ ಬೆಲೆ ಮೇಲೆಯೂ ಕೇಂದ್ರ ನಿಗಾ ವಹಿಸಿದೆ.

ಗಣೇಶ ಚತುರ್ಥಿ ಎದುರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ಚಿಲ್ಲರೆ ಬೆಲೆ ಇಂತಿದೆ. ಟೊಮೆಟೊ- 38.33 ರೂ., ಆಲೂಗಡ್ಡೆ- 22.63 ರೂ., ಕಡಲೆಬೇಳೆ- 86.71 ರೂ., ಅಟ್ಟಾ- 40.48 ರೂ., ತುರ್ ದಾಲ್ 123.30 ರೂ., ಈರುಳ್ಳಿ 37.87 ರೂ. ಹಾಗೂ ಹಾಲು- ಲೀಟರ್ 60.82 ರೂ. ದರದಲ್ಲಿದೆ.


Spread the love

About Laxminews 24x7

Check Also

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ – ಕರ್ನಾಟಕದ ಪೈಲಟ್ ಸೇರಿ ಇಬ್ಬರು ದುರ್ಮರಣ

Spread the loveಲಕ್ನೋ: ತರಬೇತಿ ವಿಮಾನವೊಂದು  ಪತನಗೊಂಡ ಪರಿಣಾಮ ಕರ್ನಾಟಕದ ಪೈಲಟ್  ಸೇರಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ