ಚಾಮರಾಜನಗರ: ಹನೂರಿನಲ್ಲಿ ಮೂವರು ಬೇಟೆಗಾರರ ಎನ್ಕೌಂಟರ್ ಸಂಬಂಧ ನಾಳೆ (ಸೋಮವಾರ) ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದಾರೆ.
ತನಿಖೆಯಲ್ಲಿ ಅರಣ್ಯ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಕಣರದ ಪ್ರಮುಖ ಸಾಕ್ಷಿ ಮಹಿಮಾ ದಾಸ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಂದು ಘಟನೆ ಹೇಗಾಯ್ತು? ಏನಾಯ್ತು? ಅನ್ನೋ ಕಂಪ್ಲೀಟ್ ವರದಿ ತಯಾರಿಸಲಾಗಿದ್ದು ಬಹುತೇಕ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ.
ಇತ್ತ ಆ.15ರಂದು ಪ್ರತಿಭಟನೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋಪದಲ್ಲಿ ಗಂಗನದೊಡ್ಡಿ ಗೋವಿಂದ ಸೇರಿ ಆತನ ಸಹಚರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಶೂಟೌಟ್ ನಡೆದಿದ್ದ ಕರಡಿಕಲ್ಲು ಒಡ್ಡು ಬಳಿ ಮೂವರು ನರಳಿ ಪ್ರಾಣಬಿಟ್ಟ ಸ್ಥಳದಲ್ಲಿ ರಕ್ತದ ಕಲೆ ಇನ್ನೂ ಮಾಸಿಲ್ಲ. ಅರಣ್ಯ ಸಿಬ್ಬಂದಿ ಗುಂಡೇಟಿಗೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲೇ ಆಂಥೋಣಿಸ್ವಾಮಿ, ಪೀಟರ್, ಕುಮಾರ್ ಸಾವನ್ನಪ್ಪಿದ್ದರು.
ಇನ್ನು ಮೂವರ ಹತ್ಯೆಗೆ ಪ್ರತೀಕಾರವಾಗಿ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ಉದ್ರಿಕ್ತರು ಡೈನಾಮೈಟ್, ಜಿಲೆಟಿನ್ ಇಟ್ಟು ಸ್ಫೋಟ ಮಾಡಿದ್ರು. ಹೊಳೆಮುರಿದಟ್ಟಿ ಶಿಬಿರ ಸ್ಫೋಟವನ್ನು ಟಾರ್ಗೆಟ್ ಮಾಡಿ ಸ್ಫೋಟಗೊಳಿಸಲಾಗಿತ್ತು.
Laxmi News 24×7