ಜೋಯಿಡಾ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿದ್ದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭಾರತೀಯ ಕಲೆ ಸಂಸ್ಕೃತಿ ಅಳಿಸಿ ಹೋಗಬಾರದು, ಅದು ಮುಂದಿನ ಪೀಳಿಗೆಗೆ ಉಳಿಯಬೇಕು. ಇಂದಿನ ಮಕ್ಕಳಿಗೆ, ಯುವಕರಿಗೆ ಕಲಾ ಪ್ರಕಾರಗಳ ಮೂಲಕ ಜನಪದ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಕೆಲಸ ಯುವ ಜನ ಮೇಳಗಳಿಂದ ಆಗುತ್ತಿದೆ.
ಯುವ ಜನ ಮೇಳದಲ್ಲಿ ಜಿಲ್ಲೆಯ ಹೆಚ್ಚು ಹೆಚ್ಚು ಯುವ ಪ್ರತಿಭೆಗಳು ಹೊರ ಹೊಮ್ಮುಲಿ, ಬದಲಾವಣೆ ಜಗದ ನಿಯಮ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವೂ ಬದಲಾಗುತ್ತದೆ ಆದರೆ ನಮ್ಮ ಕಲೆ , ಸಂಸ್ಕತಿ ಉಳಿಸಬೇಕು ಎಂದು ಹೇಳಿದರು.
ಈ ಸಭಾ ಕಾರ್ಯಕ್ರಮಕ್ಕೂ ಮೊದಲು ಜೋಯಿಡಾ ಮುಖ್ಯ ವೃತ್ತದಿಂದ ಯಕ್ಷಗಾನ, ಡೊಳ್ಳು, ವೀರಗಾಸೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಮೂಲಕ ಪೂರ್ಣಕುಂಭ ಸ್ವಾಗತ ನೀಡಿದ್ದು ನಮ್ಮ ದೇಶದ ಸಂಸ್ಕೃತಿ , ಕಲೆಗಳ ಪ್ರತೀಕವಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಜೋಯಿಡಾ ತಾಲೂಕಿನ ಮಹಿಳೆಯರನ್ನು ಮತ್ತು ಯುವತಿಯರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಹರೀಶಕುಮಾರ, ಜಿಪಂ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀ ಎಂ.ರೋಷನ್, ತಾ.ಪಂ ಅಧ್ಯಕ್ಷೆ ಶ್ರೀ ನರ್ಮದಾ ಪಾಟ್ನೇಕರ, ಜೋಯಿಡಾ ಗ್ರಾ ಪಂ ಉಪಾಧ್ಯಕ್ಷರಾದ ಶಾಮ ಪೋಕಳೆ, ಬಿಜೆಪಿ ತಾಲೂಕು ಅಧ್ಯಕ್ಷರಾದ ಶ್ರೀ ಸಂತೋಷ ರೇಡ್ಕರ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ,ಕಲಾವಿದರು ಉಪಸ್ಥಿತರಿದ್ದರು.