ಬೆಂಗಳೂರು: ಯಾವುದಕ್ಕಾಗಿ ಗಾಂಧೀಜಿ ಹೋರಾಟ ಮಾಡಿದ್ರು ಅದು ಈಗ ದೇಶದಲ್ಲಿ ನೆಲೆಸುತ್ತಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ರೈತ ಸಂಘಟನೆಗಳು ಆಚರಿಸುತ್ತಿರುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿ ದೇಶದಲ್ಲಿ ಶಾಂತಿ ನೆಲೆಸಬೇಕು, ಎಲ್ಲರೂ ನೆಮ್ಮದಿಯಿಂದ ಬಾಳಬೇಕು, ಸೌಹಾರ್ದತೆ ನೆಲೆಸಬೇಕು ಎಂದುಕೊಂಡವರು. ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಡಿದ್ರೋ ಅದಕ್ಕಿಂತಲೂ ಹೆಚ್ಚು ಶಾಂತಿ ಸೌಹಾರ್ದತೆಗಾಗಿ ಹೋರಾಡಿದವರು. ಗಾಂಧೀಜಿ ಜೊತೆಗೆ ಬಹಳಷ್ಟು ಜನ ಹೋರಾಟ ಮಾಡಿದ್ದಾರೆ, ಅವರನ್ನೂ ನಾವು ಸ್ಮರಿಸಬೇಕು ಎಂದರು.
ಗಾಂಧಿಯವರನ್ನ ಕೊಂದವರನ್ನ ಪ್ರತಿಮೆ ಮಾಡಿ ಪೂಜಿಸೋ ಕೆಲಸ ನಡೆಯುತ್ತಿದೆ. ಇದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ. ದೇಶದ ಸ್ವಾತಂತ್ರ್ಯದಲ್ಲಿ ಬಿಜೆಪಿ ಆರ್ಎಸ್ಎಸ್ ನವರು ಸತ್ತಿದ್ದಾರಾ? ಎಂದು ಪ್ರಶ್ನಿಸಿದ ಅವರು, ನಾವು ಇವರಿಂದ ಪಾಠ ಕಲಿಯಬೇಕಾಗಿಲ್ಲ. ಇಂದಿರಾಗಾಂಧಿ, ರಾಜೀವ್ಗಾಂಧಿ ದೇಶಕ್ಕಾಗಿ ಪ್ರಾಣಕೊಟ್ಟರು ಎಂದು ಸಿದ್ದರಾಮಯ್ಯ ಹೇಳಿದರು.
ಈಗ ಮತ್ತೆ ದೇಶದಲ್ಲಿ ಕಾಂಗ್ರೆಸ್ನವರು ಎರಡನೇ ಸ್ವಾತಂತ್ರ್ಯಕ್ಕಾಗಿ ಅಣಿಯಾಗಬೇಕು. ಶಾಂತಿ, ಸೌಹಾರ್ದತೆ ಸಂಪೂರ್ಣವಾಗಿ ಕಳೆದುಹೋಗಿದೆ. ರೈತರ ವಿರುದ್ಧ, ಕಾರ್ಮಿಕರ ವಿರುದ್ಧ, ಸಾಮರಸ್ಯ ಹಾಳು ಮಾಡಲು ಕಾನೂನುಗಳನ್ನು ತರ್ತಿದ್ದಾರೆ. ರೈತರು ಎರಡು ತಿಂಗಳಿಂದ ಹೋರಾಟ ಮಾಡ್ತಿದ್ದಾರೆ. ರೈತರ ಪ್ರತಿಭಟನೆ ಪ್ರಧಾನಿಗೆ ಕಾಣುತ್ತಿಲ್ವಾ..? ನಿನ್ನೆ ರಾಷ್ಟ್ರಪತಿಯವರಿಂದಲೂ ಸುಳ್ಳು ಹೇಳಿಸಿದ್ದಾರೆ. ಇವತ್ತು ನಾವು ಸಂಕಲ್ಪ ಮಾಡೋಣ. ರಾಹುಲ್ ಗಾಂಧಿ, ಸೋನಿಯಾಗಾಂಧಿ, ಕಾಂಗ್ರೆಸ್ ಮಾತ್ರ ಹೋರಾಟ ಮಾಡೋಕೆ ಸಾಧ್ಯ. ಬಿಜೆಪಿ ಕಿತ್ತೊಗೆಯಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು.