ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೋರಿಕೆಗಷ್ಟೇ ಹಸಿರು ಶಾಲು ಹಾಕ್ತಾರೆ. ಆದ್ರೆ ಯಾವುದೇ ರೀತಿ ರೈತರ ಬಗ್ಗೆ ಕಾಳಜಿ ಅವರಿಗಿಲ್ಲ. ಬಿಜೆಪಿ ಕಾರ್ಪೊರೇಟರ್ ಪರ ಇರುವುದರಿಂದ ಕಾಯ್ದೆ ಹಿಂಪಡೆಯಲು ಹಿಂದೆಟು ಹಾಕುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಇಂದು ನಡೆದ ರಾಜಭವನ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಕಾರ್ಪೊರೇಟರ್ ಪರ ಇವೆ. ಆದ ಕಾರಣ ಸರ್ಕಾರ ಪ್ರತಿ ಬಾರಿ ಸಮರ್ಥನೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟರ್ ಪರ ಹಿಂದೆಯೂ ಇತ್ತು, ಈಗಲೂ ಇದೆ, ಮುಂದಿಯೂ ಇರಲಿದೆ ಎಂದು ಕಿಡಿಕಾರಿದರು.
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಕಾಯ್ದೆ ಹಿಂಪಡೆಯಬೇಕೆನ್ನುವುದು ನಮ್ಮ ಆಗ್ರಹ. ಪ್ರತಿಭಟನಾ ಮೆರವಣಿಗೆ ಬಳಿಕ ರಾಜ್ಯಪಾಲರಿಗೂ ಮನವಿ ನೀಡಲಿದ್ದೇವೆ. ರೈತರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ, ಅವರಿಗೆ ಪೂರಕವಾಗಿ ಕಾಂಗ್ರೆಸ್ ಮುಂದಿನ ಹೋರಾಟ ನಿರ್ಧರವಾಗಲಿದೆ ಎಂದರು.
ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದಲ್ಲಿರುವ ಸಚಿವರು ರೈತ ವಿರೋಧಿ ಹೇಳಿಕೆ ನೀಡುತ್ತಿರುವುದು ಹೊಸದಲ್ಲ. ಪ್ರತಿಬಾರಿಯೂ ಸಹ ರೈತರಿಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಅನ್ನದಾತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.