ನವದೆಹಲಿ, ಜ.29-ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಗಲ್ಲು ಶಿಕ್ಷೆ ಸಮೀಪಿರುತ್ತಿರುವಂತೆ ನಿರ್ಭಯಾ ಗ್ಯಾಂಗ್ರೇಪ್ ಮತ್ತು ಹಂತಕರು ಮರಣ ದಂಡನೆಯನ್ನು ವಿಳಂಬ ಮಾಡಲು ಮತ್ತೆ ಮತ್ತೊಂದು ತಂತ್ರ ಅನುಸರಿಸಿದ್ದಾರೆ. ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸಲಿರುವ ನಾಲ್ವರು ದೋಷಿಗಳಲ್ಲಿ ಅಕ್ಷಯ್ ಕುಮಾರ್ ಇಂದು ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ (ಪರಿಹಾರಾತ್ಮಕ) ಅರ್ಜಿ ಸಲ್ಲಿಸಿದ್ದಾನೆ.
ಇದರಿಂದಾಗಿ ಫೆ.1ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ದೋಷಿಗಳಿಗೆ ನೇಣುಗಂಬಕ್ಕೇರಿಸುವುದು ವಿಳಂಬವಾಗುವ ಸಾಧ್ಯತೆಯ ಅನುಮಾನ ಹುಟ್ಟು ಹಾಕಿದೆ. ಅಕ್ಷಯ್ ಕುಮಾರ್ ಪರ ವಕೀಲ ಎ.ಪಿ.ಸಿಂಗ್ ಇಂದು ಕ್ಯುರೇಟಿವ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿದರು. ಅರ್ಜಿಯೊಂದಿಗೆ ಇನ್ನೂ ಕೆಲವು ದಾಖಲೆಗಳ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿಳಿಸಿದೆ.
ಕ್ಷಮಾದಾನ ಅರ್ಜಿ ವಜಾಗೊಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕ್ರಮವನ್ನು ಪ್ರಶ್ನಿಸಿ ಮತ್ತೊಬ್ಬ ದೋಷಿ ಮುಖೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ವಜಾಗೊಳಿಸಿದೆ. ಮತ್ತೊಬ್ಬ ದೋಷಿ ಅಕ್ಷಯ್ ಕುಮಾರ್ ಈಗ ಸುಪ್ರೀಂಕೋರ್ಟ್ ಪರಿಹಾರಾತ್ಮಕ ಅರ್ಜಿಯ ನೆಪವೊಡ್ಡಿ ಸುಪೀಂಕೋರ್ಟ್ಗೆ ಮೊರೆ ಹೋಗಿರುವುದರಿಂದ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಮುಖೇಶ್ ಕುಮಾರ್ ಸಿಂಗ್, ಅಕ್ಷಯ್ಕುಮಾರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮ ಅವರಿಗೆ ಫೆ.1ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕೆಂದು ಈಗಾಗಲೇ ನ್ಯಾಯಾಲಯ ದಿನಾಂಕ ನಿಗದಿಗೊಳಿಸಿದೆ.