ನವದೆಹಲಿ: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಪ್ರಧಾನಿ ಮೋದಿ ಎರಡನೇ ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮಾಡಿ ಮಾತನಾಡಿದ್ದು ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಏಪ್ರಿಲ್ 14ರ ನಂತರ ಲಾಕ್ಡೌನ್ ಇರುತ್ತಾ ಇಲ್ಲವೋ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಏನು ತಿಳಿಸಿಲ್ಲ. ಈ ವೇಳೆ ಮುಂದಿನ ವಾರವೂ ಕೊರೊನಾ ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಮೆಡಿಕಲ್ ಉತ್ಪನ್ನಗಳು ಯಾವುದೇ ತಡೆ ಇಲ್ಲದೇ ಶೀಘ್ರವಾಗಿ ತಲುಪಬೇಕು. ಮೆಡಿಕಲ್ ಉತ್ಪನ್ನ ತಯಾರಿಕೆಗೆ ಬೇಕಾಗಿರುವ ಕಚ್ಚಾ ವಸ್ತುಗಳು ಪೊರೈಕೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ತಿಳಿಸಿದ್ದಾರೆ.
ರಾಜ್ಯಗಳ ಮುಖ್ಯಮಂತ್ರಿಗಳು ಕೊರೊನಾ ತಡೆಗಟ್ಟಲು ತಾವು ಕೈಗೊಂಡ ಕ್ರಮಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸೋಂಕಿತರ ಪತ್ತೆಯ ಜೊತೆ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಭಾಗವಹಿಸಿದವರ ಪತ್ತೆ ಕಾರ್ಯದ ವಿವರವನ್ನು ಮೋದಿ ಮುಂದೆ ವಿವರಿಸಿದರು.
ಈ ಸಂದರ್ಭದಲ್ಲಿ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ವ್ಯಕ್ತಿಗಳನ್ನು ಶೀಘ್ರವೇ ಗುರುತಿಸಿ ಕ್ವಾರಂಟೈನ್ ಮಾಡಬೇಕು. ಸಮುದಾಯಕ್ಕೆ ವೈರಸ್ ಹಬ್ಬದಂತೆ ನೋಡಿಕೊಳ್ಳಬೇಕಿದೆ. ಜನ ಸಾಮಾನ್ಯರ ಅಗತ್ಯ ವಸ್ತುಗಳ ವಿತರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.