ಮಂಡ್ಯ: ಮಹಾಮಾರಿ ಕೊರೊನಾ ಅಬ್ಬರದಿಂದ ಸಕ್ಕರೆ ನಾಡು ದಿನೇ ದಿನೇ ಸುಧಾರಿಸಿಕೊಳ್ಳುವಷ್ಟರಲ್ಲೇ ಮತ್ತೆ ಕೊರೊನಾ ಶಾಕ್ ಕೊಟ್ಟಿದೆ. ಸೋಮವಾರ ಜಿಲ್ಲೆಯ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾತಂಕ ತಂದೊಡ್ಡಿದ್ದ ತಬ್ಲಿಘಿ ಹಾಗೇ ಜ್ಯುಬಿಲಿಯಂಟ್ ನಂಟಿಂದ ದಿನೇ ದಿನೇ ಮಂಡ್ಯ ಜಿಲ್ಲೆ ಸುಧಾರಿಸಿಕೊಳುತ್ತಿತ್ತು. ಆದರೆ ಈ ಮಧ್ಯೆ ಕೊರೊನಾ ಮತ್ತೆ ಜನರ ನಿದ್ದೆಗೆಡಿಸಿದೆ. ತಬ್ಲಿಘಿ, ಜ್ಯುಬಿಲಿಯಂಟ್ ಬಳಿಕ ಈ ಮುಂಬೈ ನಂಟು ಜಿಲ್ಲೆಯಲ್ಲಿ ಹೊಸದೊಂದು ತಲೆನೋವಾಗಿದೆ.
ಸೋಮವಾರ ಪಾಸಿಟಿವ್ ಆಗಿರುವ ಎರಡು ಪ್ರಕರಣಗಳಲ್ಲಿ ಮುಂಬೈ ನಂಟಿದೆ. ರೋಗಿ ನಂಬರ್ 862 ವ್ಯಕ್ತಿ 38 ವರ್ಷದವರಾಗಿದ್ದು, ಮೂಲತಃ ಕೆಆರ್ಪೇಟೆ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದವರು. ಕಳೆದ 25 ವರ್ಷಗಳಿಂದ ಮುಂಬೈನ ಹೊಟೇಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಡಿಸಿ ವೆಂಕಟೇಶ್ ತಿಳಿಸಿದ್ದಾರೆ.
ಚನ್ನರಾಯಪಟ್ಟಣದ ವ್ಯಕ್ತಿಗೆ ಕೊರೊನಾ:
ಚನ್ನರಾಯಪಟ್ಟಣ ನಿವಾಸಿಯಾಗಿರುವ 30 ವರ್ಷದ ರೋಗಿ 861ನೇ ವ್ಯಕ್ತಿ ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸ ಮುಗಿಸಿ ಸ್ನೇಹಿತರ ಕಾರಿನಲ್ಲಿ ಚನ್ನರಾಯಪಟ್ಟಣ ಮೂಲಕ ಮಂಡ್ಯ ಜಿಲ್ಲೆಗೆ ಹೋಗಿದ್ದಾರೆ. ಕಾರನ್ನು ಹಾಸನದಲ್ಲಿ ನಿಲ್ಲಿಸಲಿಲ್ಲ. ಇದರಿಂದ ಹಾಸನ ಜಿಲ್ಲೆಗೆ ಯಾವುದೇ ಕೊರೊನಾ ವೈರಸ್ ಆತಂಕದ ಭಯವಿಲ್ಲ. ಜೊತೆಗೆ ಹಾಸನದಲ್ಲಿ ಈತನ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ ಎಂದು ಹಾಸನ ಜಿಲ್ಲಾಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ.